ಮೈಸೂರು: ಕಾಡುಹಂದಿಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸ್ ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಸಾತಗಳ್ಳಿ ಗ್ರಾಮದ ಮಂಜುನಾಥ್ ಮತ್ತು ಮಂಜು ಬಂಧಿತರು. ಇವರು ವಾಹನದಲ್ಲಿ ಎರಡು ಕಾಡುಹಂದಿಗಳ ಸಾಗಿಸುತ್ತಿದ್ದ ವೇಳೆ ನಂಜನಗೂಡು ತಾಲ್ಲೂಕಿನ ಹಳ್ಳಿದಿಡ್ಡಿ ಗ್ರಾಮದ ಬಸ್ನಿಲ್ದಾಣದ ಬಳಿ ಅಧಿಕಾರಿಗಳು ಹಿಡಿದು, ಕಾಡುಹಂದಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಅರಣ್ಯ ಸಂಚಾರ ದಳದ ಸಿಬ್ಬಂದಿ ಎಚ್.ಕೆ.ವೆಂಕಟಾಚಲಯ್ಯ, ಎಚ್.ನರಸಿಂಹಮೂರ್ತಿ, ಟಿ.ಆರ್.ರಘು, ಎಲ್.ಚಲುವರಾಜು, ಎಲ್.ಮಂಜುನಾಥ್, ಪ್ರದೀಪ್ ಕಾರ್ಯಾಚರಣೆಯಲ್ಲಿ ಇದ್ದರು.
ಮಹಿಳೆ ಆತ್ಮಹತ್ಯೆ
ಮೈಸೂರುತಾಲ್ಲೂಕಿನ ರಮ್ಮನಹಳ್ಳಿ ನಿವಾಸಿ ಮಂಗಳಮ್ಮ (43) ಹೆಚ್ಚು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರ ಪತಿ ಮೃತಪಟ್ಟಿದ್ದರು. ಪುತ್ರರೊಬ್ಬರು ಇವರ ಜತೆಗಿದ್ದರು. ಪದೇ ಪದೇ ಕಾಡುತ್ತಿದ್ದ ಅನಾರೋಗ್ಯದಿಂದ ಬೇಸರಗೊಂಡು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೈಸೂರು ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.