ಮೈಸೂರು: ‘ಸ್ವಚ್ಛ ಸರ್ವೇಕ್ಷಣ್–2020’ ಸಮೀಕ್ಷೆಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ ಮತ್ತು ಎಚ್.ಡಿ.ಕೋಟೆ ಪಟ್ಟಣಗಳಿಗೆ ಗೌರವ ಲಭಿಸಿದೆ. ದಕ್ಷಿಣ ವಲಯದ ರಾಜ್ಯಗಳ ವಿಭಾಗದಲ್ಲಿ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.
ದಕ್ಷಿಣ ವಲಯದಲ್ಲಿ 25 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪಟ್ಟಣಗಳಲ್ಲಿ ಪಿರಿಯಾಪಟ್ಟಣವು ‘ಅತ್ಯಂತ ಸ್ವಚ್ಛ ನಗರಿ’ ಹಿರಿಮೆ ತನ್ನದಾಗಿಸಿಕೊಂಡಿದೆ. ಇದೇ ವಿಭಾಗದಲ್ಲಿ ‘ನಾಗರಿಕರ ಪ್ರತಿಕ್ರಿಯೆ’ಯಲ್ಲಿ ಎಚ್.ಡಿ.ಕೋಟೆ ಅತ್ಯುತ್ತಮ ಪಟ್ಟಣ ಎನಿಸಿಕೊಂಡಿದೆ.
25ಸಾವಿರ– 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣಗಳಲ್ಲಿ ಕೆ.ಆರ್.ನಗರವು ‘ನಾಗರಿಕರ ಪ್ರತಿಕ್ರಿಯೆ’ಯಲ್ಲಿ ಅತ್ಯುತ್ತಮ ಪುರಸಭೆ ಸ್ಥಾನ ತನ್ನದಾಗಿಸಿಕೊಂಡಿದೆ.
50 ಸಾವಿರ–1 ಲಕ್ಷ ಜನಸಂಖ್ಯೆಯ ಪಟ್ಟಣಗಳಲ್ಲಿ ‘ನಾಗರಿಕರ ಪ್ರತಿಕ್ರಿಯೆ’ ವಿಭಾಗದಲ್ಲಿ ಹುಣಸೂರು ಅತ್ಯುತ್ತಮ ನಗರಸಭೆ ಗೌರವ ಪಡೆದುಕೊಂಡಿದೆ.
‘ಪುರಸಭೆಯು ದಕ್ಷಿಣ ಭಾರತದಲ್ಲಿ ಸ್ವಚ್ಛನಗರಿ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿ ಗಳಿಸಲು ಪಿರಿಯಾಪಟ್ಟಣದ ನಾಗರಿಕರು ಸ್ವಚ್ಛತೆ ಕಾಪಾಡಿಕೊಳ್ಳಲು ತೋರಿದ ಕಾಳಜಿ ಮತ್ತು ಪುರಸಭೆಯ ಸ್ವಚ್ಛತಾ ಸಿಬ್ಬಂದಿ ಪರಿಶ್ರಮ ಕಾರಣ’ ಎಂದು ಪಿರಿಯಾಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದ್ದಾರೆ.