ಮೈಸೂರು: ಪರಸ್ತ್ರೀ ವ್ಯಾಮೋಹದಿಂದ ಗರ್ಭಿಣಿಯಾಗಿದ್ದ ಪತ್ನಿಯನ್ನೇ ಕೊಲೆ ಮಾಡಿದ್ದಾನೆ ಎಂದು ವ್ಯಕ್ತಿಯೊಬ್ಬನ ಮೇಲೆ ನಗರದ ಅಶೋಕಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ಬಳಿಯ ಶಾಗ್ಯಾ ಗ್ರಾಮದ ಕೀರ್ತನಾ (20) ಎಂಬಾಕೆಯೇ ಗಂಡನಿಂದ ಕೊಲೆಯಾಗಿದ್ದಾರೆ ಎನ್ನಲಾದ ಮಹಿಳೆ.
‘ಕೀರ್ತನಾ ಮೈಸೂರಿನ ಜಯನಗರದ ಚಿನ್ನಗಿರಿ ಕೊಪ್ಪಲಿನ ನಿವಾಸಿ ರಾಘವೇಂದ್ರ ಎಂಬಾತನನ್ನು ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ರಾಘವೇಂದ್ರನಿಗೆ ಇದೇ ಪ್ರದೇಶದ ಸುಂದ್ರಮ್ಮ ಎಂಬಾಕೆಯೊಂದಿಗೆ ಅಕ್ರಮ ಸಂಬಂಧವಿತ್ತು. ಇದರಿಂದ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ.
ಸುಂದ್ರಮ್ಮನ ಕುಮ್ಮಕ್ಕಿನಿಂದ ಭಾನುವಾರ ರಾತ್ರಿ ಹೆಂಡತಿಯನ್ನು ಹೊಡೆದು ಸಾಯಿಸಿ, ವೇಲಿನಿಂದ ಮನೆಯಲ್ಲಿ ನೇಣು ಬಿಗಿದಿದ್ದಾನೆ. ನಂತರ ಅಕ್ಕಪಕ್ಕದ ಮನೆಯವರಿಗೆ ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುದ್ದಿ ಹಬ್ಬಿಸಿದ್ದಾನೆ ಎಂದು ಕೀರ್ತನಾ ತಂದೆ ಅಶೋಕ್ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ವಿಚಾರಣೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್ಬುಕ್ನಲ್ಲಿ ನಕಲಿ ಖಾತೆ
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಗುರುದತ್ತ ಹೆಗಡೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆಯಲಾಗಿದೆ.
‘ದುಷ್ಕರ್ಮಿಗಳು ನಕಲಿ ಖಾತೆ ತೆರೆದಿದ್ದು, ಹಣದ ಸಹಾಯ ಕೋರಿದ್ದಾರೆ. ಈ ಬಗ್ಗೆ ಸೈಬರ್ ಪೊಲೀಸರಿಗೂ ಮಾಹಿತಿ ನೀಡಿರುವುದಾಗಿ’ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ರಸ್ತೆ ಅಪಘಾತ: ವಕೀಲ ಸಾವು
ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿಗೆ ಮಂಗಳವಾರ ಬೆಳಗಿನ ಜಾವದಲ್ಲಿ ಸ್ನೇಹಿತನೊಟ್ಟಿಗೆ ಬೈಕ್ನಲ್ಲಿ ತೆರಳುತ್ತಿದ್ದ ವಕೀಲರೊಬ್ಬರು, ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಕೆ.ಆರ್.ನಗರ ತಾಲ್ಲೂಕಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ ವಿನೋದ್ ರಾಜ್ (43) ಮೃತಪಟ್ಟವರು.
ಸ್ನೇಹಿತ ಮಧುಸೂದನ್ ಜೊತೆ ವಿನೋದ್ರಾಜ್ ಆಯರಹಳ್ಳಿಗೆ ಬರುತ್ತಿದ್ದರು. ಮಧುಸೂದನ್ ದ್ವಿಚಕ್ರ ವಾಹನ ಓಡಿಸುತ್ತಿದ್ದರು. ಬೈಕ್ ನಿಯಂತ್ರಣ ತಪ್ಪಿದ್ದರಿಂದ ಇಬ್ಬರು ಕೆಳಗೆ ಬಿದ್ದಿದ್ದಾರೆ. ವಿನೋದ್ರಾಜ್ ಡಾಂಬರು ರಸ್ತೆಯ ಮೇಲೆ ಬಿದ್ದಿದ್ದರಿಂದ ತೀವ್ರ ಪೆಟ್ಟು ಬಿದ್ದಿದೆ.
ಮಧುಸೂದನ್ ಸಹ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಳಿಕೆರೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.