ಮೈಸೂರು: ವಸಾಹತುಶಾಹಿ ಸಂಶೋಧನಾ ವಿಧಾನಗಳ ಬದಲಿಗೆ ಪರ್ಯಾಯ ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ.ಮುಜಫ್ಫರ್ ಅಸಾದಿ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗವು ಇಲ್ಲಿನ ಗಣಿತ ವಿಜ್ಞಾನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಕಾನೂನು ಸಂಶೋಧನೆ ವಿಧಾನ’ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಮಾಜವಿಜ್ಞಾನಗಳ ವಿಭಾಗಗಳನ್ನು ಮುಚ್ಚಬೇಕು ಎಂದು ಜಪಾನ್ ಸರ್ಕಾರ ಪ್ರಸ್ತಾಪ ಮಾಡಿತ್ತು. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಹ ಇದೇ ಬಗೆಯಲ್ಲಿ ಪ್ರತಿಪಾದಿಸಿಯೂ ಇದ್ದರು. ಸಮಾಜವಿಜ್ಞಾನವೇ ಆಗಲಿ, ಸಂಶೋಧನೆಗಳೇ ಆಗಲಿ ಹೊಸ ಕಾಲಕ್ಕೆ ತಕ್ಕಂತೆ ಬದಲಾಗದೇ ಹೋದಲ್ಲಿ ಈ ರೀತಿಯ ಅಭಿಪ್ರಾಯಗಳು ಮೂಡುತ್ತವೆ ಎಂದರು.
ಹಳೆಯ ಸಿದ್ಧಾಂತಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಹೋದರೆ ಪ್ರಯೋಜನ ಇಲ್ಲ. ಹಳೆಯದನ್ನು ವಿಮರ್ಶಿಸುವ, ಇದಕ್ಕೆ ಪರ್ಯಾಯವನ್ನು ಹುಟ್ಟು ಹಾಕುವ ಪ್ರಕ್ರಿಯೆಗಳು ನಡೆಯಬೇಕು. ಆಗ ಸಂಶೋಧನೆಗಳೇ ಆಗಲಿ, ಸಾಮಾಜಿಕವಿಜ್ಞಾನಗಳೇ ಆಗಲಿ ಜೀವಂತಿಕೆ ಪಡೆಯುತ್ತವೆ ಎಂದು ತಿಳಿಸಿದರು.
ಕೇಳಿಸಿಕೊಳ್ಳುವುದೂ ಒಂದು ಸಂಶೋಧನಾ ವಿಧಾನ
ತದೇಕಚಿತ್ತದಿಂದ ಕೇಳಿಸಿಕೊಳ್ಳುವುದೂ ಒಂದು ಸಂಶೋಧನಾ ವಿಧಾನ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಆರ್.ಶಿವಪ್ಪ ತಿಳಿಸಿದರು.
ಧಾರವಾಡದ ಹಳ್ಳಿಗಳಲ್ಲಿ ಸುಮಾರು 40 ದಿನಗಳ ಕಾಲ ಇದ್ದು, ಅಲ್ಲಿಯ ಜನರ ಮಾತುಗಳನ್ನು, ಕಥೆಗಳನ್ನು ಕೇಳಿಸಿಕೊಳ್ಳುವುದರ ಮೂಲಕ ಕಲಿತಷ್ಟು ಪಿಎಚ್ಡಿ ಅಥವಾ ಕಾಲೇಜಿನಲ್ಲಿ ಕಲಿಯಲಿಲ್ಲ ಎಂದು ಹೇಳಿದರು.
ಸಹನೆ ಮತ್ತು ತಾಳ್ಮೆ ಎಲ್ಲರಿಗೂ ಇರಬೇಕು. ಸಂಶೋಧಕರಿಗಂತೂ ಇದು ಹೆಚ್ಚಾಗಿರಬೇಕು. ಆಗ ಮಾತ್ರ ಉತ್ತಮ ಸಂಶೋಧನೆ ಮಾಡಲು ಸಾಧ್ಯ ಎಂದು ವಿವರಿಸಿದರು.
ಪ್ರಾಧ್ಯಾಪಕರಾದ ಎಂ.ಎಸ್.ಬೆಂಜಮಿನ್, ರಮೇಶ್, ಸಿ.ಬಸವರಾಜು, ಟಿ.ಆರ್.ಮಾರುತಿ ಇದ್ದರು.