ಹುಣಸೂರು: ವಿದ್ಯುತ್ ಶಾರ್ಟ್ ಸರ್ಕಿಟ್ನಿಂದಾಗಿ ತಾಲ್ಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ಕಚೇರಿ ದಾಖಲೆ ಸೇರಿದಂತೆ ಪರಿಕರಗಳು ಸುಟ್ಟು ಕರಕಲಾದ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.
ಮೂರು ದಿನದಿಂದ ಬೀಳುತ್ತಿರುವ ಭಾರಿ ಮಳೆಗೆ ಪಂಚಾಯಿತಿ ಕಟ್ಟಡ ಸೋರಿದ್ದು ವಿದ್ಯುತ್ ಅವಘಡ ಸಂಭವಿ ಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪಂಚಾಯಿತಿ ಆಡಳಿತಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಘಟನೆಯಲ್ಲಿ ಪಿಡಿಒ ಕೊಠಡಿಯಲ್ಲಿ ಇದ್ದ 14ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ಕಡತ ಮತ್ತು ಪಂಚಾಯಿತಿ ಸಿಬ್ಬಂದಿ ವೇತನ ಕಡತಗಳು ಸೇರಿದಂತೆ ಸಿಸಿಟಿವಿ ಕ್ಯಾಮೆರಾ, ಕಂಪ್ಯೂಟರ್, ಶುದ್ಧ ನೀರು ಯೋಜನೆ ವಸ್ತು ಸೇರಿದಂತೆ ಒಟ್ಟು ₹ 3.3 ಲಕ್ಷ ಮೌಲ್ಯದ ವಸ್ತುಗಳು ಘಟನೆಯಲ್ಲಿ ಸುಟ್ಟ ಕರಕಲಾಗಿದೆ.
ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಬಂದು ಪರಿಶೀಲಿಸಿದರು.
ಅಂಗಡಿಯಲ್ಲಿನ ವಸ್ತುಗಳು ನಾಶ
ಕೆ.ಆರ್.ನಗರ: ಇಲ್ಲಿನ ಗುರುಡಗಂಬ ವೃತ್ತದ ಬಳಿಯ ಜಮ್ಶಿದ್ ಪಂಕ್ಚರ್ ಅಂಗಡಿಯಲ್ಲಿ ಶುಕ್ರವಾರ ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್ನಿಂದ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.
ಅಂಗಡಿಯಲ್ಲಿದ್ದ ಪಂಕ್ಚರ್ ಮೋಟಾರ್, ಲಾರಿ ಟೈರ್ಗಳು, ಬ್ಯಾಟರಿ, ಬ್ಯಾಟರಿ ಚಾರ್ಜರ್, ಮೆಕ್ಯಾನಿಕ್ ಟೂಲ್ಸ್, ಎಂಜಿನ್ ಗೇರ್ ಬಾಕ್ಸ್ ಸೇರಿದಂತೆ ಸುಮಾರು ₹ 4.5ಲಕ್ಷ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಶಾರ್ಟ್ ಸರ್ಕಿಟ್ ಬಗ್ಗೆ ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣಾಧಿಕಾರಿ ರಾಮಚಂದ್ರ, ಸಿಬ್ಬಂದಿ ಕುನ್ನೇಗೌಡ, ಹರೀಶ್ ಅವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ವಾರದ ಹಿಂದೆಯಷ್ಟೇ ಸಾಲ ಮಾಡಿ ಸಾವಿರಾರು ರೂಪಾಯಿ ಬಂಡವಾಳ ಹಾಕಿದ್ದೆ ಎಂದು ಅಂಗಡಿ ಮಾಲೀಕ ಜಮ್ಶಿದ್ ಅಳಲು ತೋಡಿಕೊಂಡರು.