ಮೈಸೂರು: ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಎತ್ತರಕ್ಕೆ ಏರಿಸಿದ ಕಲಾಪ್ರಕಾರ ಯಕ್ಷಗಾನ ತಾಳಮದ್ದಲೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ ಇಲ್ಲಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಗರದ ಕಿರು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಪ್ರಕ್ಷುಬ್ಧ ರಾಧೇಯ’ ಏಕವ್ಯಕ್ತಿ ತಾಳಮದ್ದಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಂಸ್ಕೃತಿಕವಾಗಿ ಕರ್ನಾಟಕದ ಪ್ರತಿ ಜಿಲ್ಲೆಯ ಕೊಡುಗೆಯೂ ಭಿನ್ನವಾಗಿದೆ. ಆದರೆ, ಮರೆಯಲು ಸಾಧ್ಯವಾಗದ ಕೊಡುಗೆಯನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ಯಕ್ಷಗಾನ, ತಾಳಮದ್ದಲೆಗಳ ಮೂಲಕ ನೀಡಿವೆ ಎಂದರು.
ಯಕ್ಷಗಾನವು ದೃಶ್ಯವೈಭವದ ಮೂಲಕ ಶ್ರೀಮಂತಿಕೆಯನ್ನು ಪ್ರದರ್ಶಿಸಿದರೆ ತಾಳಮದ್ದಲೆ ವಾಗ್ವೈಭವದ ಮೂಲಕ ತನ್ನ ಹಿರಿಮೆಯನ್ನು ಅನಾವರಣಗೊಳಿಸುತ್ತದೆ ಎಂದು ಬಣ್ಣಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮೈಸೂರು ಘಟಕದ ಉಪಾಧ್ಯಕ್ಷ ಪ್ರೊ.ರಾಮರತನ್ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ, ಪರಿಷತ್ ಕಾರ್ಯದರ್ಶಿ ಬಿ.ಕೆ.ಶ್ರೀನಾಥ್ ಭಾಗವಹಿಸಿದ್ದರು.