ಮೈಸೂರು: ಮನೆಗೆ ನುಗ್ಗಿ ಮಹಿಳೆಯೊಬ್ಬರ ಬಾಯಿ ಮುಚ್ಚಿ ಚಿನ್ನಾಭರಣಗಳನ್ನು ದೋಚಿದ್ದ ಕಳ್ಳನೊಬ್ಬನನ್ನು ಐದೇ ಗಂಟೆಯಲ್ಲಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನ್ನಿಮಂಟಪದ ರೆಹಮಾನ್ ಷರೀಫ್ (28) ಬಂಧಿತ ಆರೋಪಿ. ಈತನಿಂದ ₹ 4 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತ ಮನುವನ ಉದ್ಯಾನದ ಬಳಿಯ ಪ್ರಭಾ ಎಂಬುವವರ ಮನೆಯಲ್ಲಿ ಅವರ ತಾಯಿ ನಾಗರತ್ನಾ (87) ಬಿಟ್ಟು ಉಳಿದವರೆಲ್ಲ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಿದ್ದಾಗ ಮನೆಗೆ ನುಗ್ಗಿದ್ದಾನೆ. ನಾಗರತ್ನಾ ಅವರ ಬಾಯಿಯನ್ನು ಬಟ್ಟೆಯಿಂದ ಮುಚ್ಚಿ, ಅವರು ಧರಿಸಿದ್ದ ₹ 4 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದಾನೆ.
ತಕ್ಷಣ ಪೊಲೀಸರಿಗೆ ಇವರು ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ರೆಹಮಾನ್ ಚಹರೆ ಕಂಡು ಬಂದಿದೆ. ಹುಡುಕಾಟ ನಡೆಸಿದಾಗ ಬಲ್ಲಾಳ್ ವೃತ್ತದಲ್ಲಿ ಈತ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು: ಇಲ್ಲಿನ ಮಂಚೇಗೌಡನ ಕೊಪ್ಪಲಿನ ನಿವಾಸಿ ಪೂನಮ್ ಸನಾರ್ ಕಿಟಕಿಯ ಮೂಲಕ ಮನೆ ಬಾಗಿಲು ತೆರೆದ ಕಳ್ಳನೊಬ್ಬ ಮನೆಯಲ್ಲಿದ್ದ ಮೊಬೈಲ್, ಲ್ಯಾಪ್ಟಾಪ್ ಹಾಗೂ ಪರ್ಸ್ನ್ನು ಕಳವು ಮಾಡಿದ್ದಾನೆ. ಈ ಕುರಿತು ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.