ಮೈಸೂರು: ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ಎರಡನೇ ಶುಕ್ರವಾರದ ವಿಶೇಷ ಪೂಜೆಯೂ ಭಕ್ತರಿಲ್ಲದೆ ಸಾಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಶುಕ್ರವಾರ, ಶನಿವಾರ, ಭಾನುವಾರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧಿಸಿರುವುದರಿಂದ, ಯಾರೊಬ್ಬರೂ ಇತ್ತ ಸುಳಿಯಲಿಲ್ಲ. ನಸುಕಿನಲ್ಲೇ ವಿಶೇಷ ಪೂಜೆ ನಡೆದವು.
ಆಷಾಢ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ಚಾಮುಂಡೇಶ್ವರಿ ದೇಗುಲ ಪುಷ್ಪಾಲಂಕಾರಗೊಂಡಿತ್ತು. ಧಾರ್ಮಿಕ ವಿಧಿ ವಿಧಾನಗಳು ಪ್ರತಿ ವರ್ಷದಂತೆಯೇ ನೆರವೇರಿದವು. ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯ ಪಾಲನೆಯಾಯ್ತು.
‘ಬೆಳಿಗ್ಗೆ 3.30ರಿಂದ ರುದ್ರಾಭಿಷೇಕ, ಪಂಚಾಮೃತಾಭಿಷೇಕ ನಡೆಯಿತು. ನಂತರ ತಾಯಿಗೆ ವಿಶೇಷ ಅಲಂಕಾರ ಮಾಡಿದೆವು. ದೇಗುಲದ ಪ್ರಾಂಗಣದಲ್ಲಿ ಉತ್ಸವವೂ ನೆರವೇರಿತು. ಎಂದಿನಂತೆ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿವೆ’ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದರು.