ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಯತ್ತತೆ ಸಿಗದಂತೆ ಸಿಐಐಎಲ್ ಷಡ್ಯಂತ್ರ- ರಾಜಶೇಖರ ಜಮದಂಡಿ ಆರೋಪ

ಚಂಪಾ ಬದುಕು–ಬರಹ ವಿಚಾರ ಸಂಕಿರಣ
Last Updated 13 ಮಾರ್ಚ್ 2022, 13:27 IST
ಅಕ್ಷರ ಗಾತ್ರ

ಮೈಸೂರು: ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಭಾರತೀಯ ಭಾಷಾ ಸಂಸ್ಥಾನದಲ್ಲಿ (ಸಿಐಐಎಲ್) ಸಿಕ್ಕಿ ನರಳುತ್ತಿದೆ. ಶಾಸ್ತ್ರೀಯ ಕನ್ನಡ ಭಾಷೆಗೆ ಸ್ವಾಯತ್ತತೆ ಸಿಗದಂತೆ ಸಿಐಐಎಲ್‌ನಲ್ಲಿರುವ ಪರಭಾಷಿಕರು ನೋಡಿಕೊಳ್ಳುತ್ತಿದ್ದಾರೆ’ ಎಂದು ಸಾಹಿತಿ ಡಾ.ರಾಜಶೇಖರ ಜಮದಂಡಿ ಆರೋಪಿಸಿದರು.

ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಭಾನುವಾರ ನಡೆದ ‘ಪ್ರೊ. ಚಂದ್ರಶೇಖರ ಪಾಟೀಲರ ಬದುಕು ಮತ್ತು ಬರಹ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಚಂಪಾ ಸಹ ಹೋರಾಟ ಮಾಡಿದ್ದರು. ಸ್ಥಾನಮಾನ ಸಿಕ್ಕರೂ ಸ್ವಾಯತ್ತತೆ ಸಿಗಲು ಅನೇಕರು ಅಡ್ಡಗಾಲಾಗಿದ್ದಾರೆ. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು 18 ಪುಸ್ತಕಗಳನ್ನು ಸಿದ್ಧಪಡಿಸಿದರೂ ಸಿಐಐಎಲ್‌ ಅಧಿಕಾರಿಗಳು ಮುದ್ರಿಸುತ್ತಿಲ್ಲ. ಪುಸ್ತಕಗಳು ಪ್ರಕಟಗೊಂಡರೆ ಕನ್ನಡ ಭಾಷೆಗೆ ಸ್ವಾಯತ್ತತೆ ಸಿಕ್ಕಿ ತಲೆಎತ್ತಿ ನಿಲ್ಲುತ್ತದೆ ಎಂಬ ಕಾರಣದಿಂದ ಸಿಐಐಎಲ್‌ನಲ್ಲಿರುವ ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ. ಕನ್ನಡ ಅಧ್ಯಯನ ಕೇಂದ್ರದಲ್ಲಿ ಏನೂ ಕೆಲಸ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಕೇಂದ್ರದಲ್ಲಿ ಆಗಿರುವ ಕೆಲಸಗಳನ್ನು ಜನರ ಮುಂದಿಡುವಂತೆ ಸಿಐಐಎಲ್ ಅನ್ನು ಪ್ರತಿಯೊಬ್ಬರೂ ಕೇಳಬೇಕು. ಸಿಐಐಎಲ್ ಸಹ ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮಾತನಾಡಿ, ‘ಚಂಪಾ ಕನ್ನಡದ ವಿಚಾರದಲ್ಲಿ ಗಟ್ಟಿ ನಿಲುವು ಹೊಂದಿದ್ದರು. ಕನ್ನಡಕ್ಕೆ ಧಕ್ಕೆ ಬಂದಾಗ, ವರ್ತಮಾನದ ವಿದ್ಯಮಾನಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಿದ್ದರು. 1996–99ರವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಇವರ ಅವಧಿಯಲ್ಲೇ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿತ್ತು. ವಿವಿಧ ಇಲಾಖೆ, ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನಗೊಂಡಿರುವ ಬಗ್ಗೆ ಪರಿಶೀಲಿಸುತ್ತಿದ್ದರು. ಅಲ್ಲಿರುತ್ತಿದ್ದ ಇಂಗ್ಲಿಷ್ ಟೈಪಿಂಗ್ ಯಂತ್ರಗಳನ್ನು ಕೊಂಡೊಯ್ದು ವಿಧಾನಸೌಧಕ್ಕೆ ಹಾಕುತ್ತಿದ್ದರು. ಅಷ್ಟರ ಮಟ್ಟಿಗೆ ಕನ್ನಡದ ಅನುಷ್ಠಾನ ವಿಷಯದಲ್ಲಿ ದೃಢ ನಿರ್ಧಾರ ಕೈಗೊಂಡಿದ್ದರು’ ಎಂದು ಸ್ಮರಿಸಿದರು.

‘ಚಂಪಾ ಬದುಕು– ಬರಹ’ ಕುರಿತು ಮಹಾರಾಜ ಕಾಲೇಜು ಸಹ ಪ್ರಾಧ್ಯಾಪಕಿ ಡಾ.ಷಹಸೀನಾ ಬೇಗಂ ವಿಚಾರ ಮಂಡಿಸಿದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಎಚ್.ಕೆ.ರಾಮು ಮಾತನಾಡಿದರು.

ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸುರೇಶ್ ಜೀವನ್ಮುಖಿ ಇದ್ದರು.

***

ಚಂಪಾ ಸಮಗ್ರ ಕೃತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಬೇಕು. ಯುವ ಬರಹಗಾರರು ಚಂಪಾ ಕೃತಿಗಳನ್ನು ಓದಬೇಕು.

–ಪ್ರೊ.ಕೆ.ಎಸ್. ಭಗವಾನ್, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT