ಮೈಸೂರು: ‘ಲದ್ದಿ ಎತ್ತೋರೆಲ್ಲಾ ಆನೆ, ಅಂಬಾರಿ ಬಗ್ಗೆ ನಿರ್ಣಯಿಸಲು ಸಾಧ್ಯವೇ?’ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ, ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.
‘ಅಪ್ಪ ಅಂಬಾರಿ ಹೊತ್ತಿದ್ದಾರೆ ಎಂದು ಮರಿಯಾನೆಗೆ ಹೊರಿಸಲು ಸಾಧ್ಯವೇ?’ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಹೇಳಿಕೆ ನೀಡಿದ್ದರು.
‘ಪ್ರಜಾವಾಣಿ’ಯ ಜುಲೈ 5ರ ಸಂಚಿಕೆಯ ಮುಖಪುಟದಲ್ಲಿ ಈ ಸುದ್ದಿ ಪ್ರಕಟವಾಗಿದೆ. ಈ ಸುದ್ದಿಯ ತುಣುಕನ್ನೇ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿರುವ ರಘು; ಸಚಿವರ ಹೆಸರು ಪ್ರಸ್ತಾಪಿಸದೆ ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.
ʻಜನ, ಅಂಬಾರಿ ಮೇಲೆ ರಾಜಕುಮಾರನಲ್ಲದೇ ರಾಜ ದ್ರೋಹಿಯನ್ನು ಕೂರಿಸುತ್ತಾರೆಯೇ? ನೆಲೆ ಇಲ್ಲದ ರಾಜಕೀಯ ದಲ್ಲಾಳಿ ಮಾತಿಗೆ ಯಾವ ಕಿಮ್ಮತ್ತೂ ಇಲ್ಲ. ಜನರ ಹೃದಯದಿ ಕಮಲ ಅರಳಿಸಿ ‘ವಿಜಯ’ದ ನಗೆ ಬೀರುವ ಪಕ್ಷ ನಿಷ್ಠೆಯ ಭರವಸೆಯ ನೇತಾರನ ಬಗ್ಗೆ ಮಾತಾಡೋ ಯಾವ ಯೋಗ್ಯತೆಯೂ ಆತನಿಗಿಲ್ಲʼ ಎಂದು ಟ್ವೀಟ್ನಲ್ಲೇ ಹರಿಹಾಯ್ದಿದ್ದಾರೆ.