ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಪರಿಶಿಷ್ಟರು ಸೌಲಭ್ಯ ಬಳಸಿಕೊಂಡು ಉದ್ಯಮಿಗಳಾಗಬೇಕು: ಕೋಕಿಲಾ

ಪರಿಶಿಷ್ಟ ಜಾತಿ, ಪಂಗಡದವರಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಕೋಕಿಲಾ
Published 8 ಸೆಪ್ಟೆಂಬರ್ 2023, 5:18 IST
Last Updated 8 ಸೆಪ್ಟೆಂಬರ್ 2023, 5:18 IST
ಅಕ್ಷರ ಗಾತ್ರ

ಮೈಸೂರು: ‘ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಸರ್ಕಾರಗಳಿಂದ ನೀಡಲಾಗುವ ಸೌಲಭ್ಯಗಳನ್ನು ಬಳಸಿಕೊಂಡು ಕೈಗಾರಿಕಾ ಉದ್ಯಮಿಗಳಾಗಬೇಕು’ ಎಂದು ಕೇಂದ್ರ ಎಂಎಸ್‌ಎಂಇ ಸಚಿವಾಲಯದ ರಾಷ್ಟ್ರೀಯ ಎಸ್‌ಸಿ– ಎಸ್‌ಟಿ ಹಬ್‌ ಬೆಂಗಳೂರು ಶಾಖೆಯ ಮುಖ್ಯಸ್ಥೆ ಎ. ಕೋಕಿಲಾ ಸಲಹೆ ನೀಡಿದರು.

ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉದ್ಯಮಿದಾರರ ಸಂಘ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕೈಗಾರಿಕೋದ್ಯಮಿಗಳ ಸರಕು, ಸಲಕರಣೆ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ಹಾಗೂ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ ಸಹಯೋಗದಲ್ಲಿ ನಗರದ ಐಡಿಯಲ್‌ ಜಾವಾ ರೋಟರಿ ಶಾಲೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಕೈಗಾರಿಕೋದ್ಯಮಿಗಳಿಗೆ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕ ವಲಯದ ಸಂಸ್ಥೆಗಳು ಅಥವಾ ಕಂಪನಿಗಳು ತಮಗೆ ಬೇಕಾದ ಸರಕುಗಳಲ್ಲಿ ಶೇ 4ರಷ್ಟನ್ನು ಪರಿಶಿಷ್ಟ ಉದ್ಯಮಿಗಳಿಂದಲೇ ಖರೀದಿಸಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಆದರೆ, ಈಗ ಶೇ 1ರಷ್ಟು ಮಾತ್ರವೇ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಜಾಗೃತಿ ಮೂಡಿಸಲಾಗುತ್ತಿದೆ. ನವೋದ್ಯಮಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಎಂಎಸ್‌ಎಂಇ ಸಂಬಂಧ್: ‘ಸಾರ್ವಜನಿಕ ವಲಯವು ಏನನ್ನು ಖರೀದಿಸುತ್ತದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಈ ಮಾಹಿತಿಯು ಎಂಎಸ್‌ಎಂಇ ಸಂಬಂಧ್ ಜಾಲತಾಣದ ವೇದಿಕೆಯ ಮೂಲಕ ದೊರೆಯುತ್ತದೆ. ಏನೇನು ಪೂರೈಸಬಹುದು ಎಂಬ ಮಾಹಿತಿಯನ್ನು ಅಲ್ಲಿ ಹಾಕಲಾಗಿದೆ. ಉದ್ಯಮ ಆರಂಭಿಸಲು ಸರ್ಕಾರದಿಂದ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದನ್ನು ಬಳಸಿಕೊಳ್ಳಲು ಹೆಚ್ಚಿನವರು ಮುಂದೆ ಬರಬೇಕು’ ಎಂದರು.

‘ಯಾವ ಉತ್ಪನ್ನ ಅಥವಾ ಸರಕಿಗೆ ಬೇಡಿಕೆ ಇದೆ ಎಂಬುದನ್ನು ತಿಳಿದು ಅದನ್ನು ಉತ್ಪಾದಿಸಲು ಮುಂದಾಗಬೇಕು. ಇದಕ್ಕಾಗಿ ಇ–ಟೆಂಡರ್‌ನಲ್ಲಿ ಭಾಗವಹಿಸಬೇಕು. ಮಾರುಕಟ್ಟೆ ಪಡೆದುಕೊಳ್ಳಲು ಕಷ್ಟಪಡಲೇಬೇಕಾಗುತ್ತದೆ. ಯಾವುದೂ ಸುಲಭವಾಗಿ ಆಗುವುದಿಲ್ಲ. ಟೆಂಡರ್‌ನಲ್ಲಿ ಹೇಗೆ ಭಾಗವಹಿಸಬೇಕು ಎಂಬುದನ್ನೂ ನಮ್ಮ ಹಬ್‌ನಿಂದ ಹೇಳಿಕೊಡಲಾಗುವುದು’ ಎಂದು ಹೇಳಿದರು.

ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ (ಎನ್‌ಎಸ್‌ಐಸಿ) ಉಪ ಪ್ರಧಾನ ವ್ಯವಸ್ಥಾಪಕ ವಿ. ಸುರೇಶ್‌ಬಾಬು ನಿಗಮದಿಂದ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉದ್ಯಮಿದಾರರ ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ವರದರಾಜ್, ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್‌. ಮೂರ್ತಿ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕೈಗಾರಿಕೋದ್ಯಮಿಗಳ ಸರಕು, ಸಲಕರಣೆ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ವಿಜಯ್‌ಶಂಕರ್‌, ಕೆಎಸ್‌ಎಫ್‌ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಎ.ಟಿ. ನಟರಾಜ್, ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ರಾಜೇಶ್, ಸ್ಟ್ರಾಟೆಜಿಕ್ ಅಕೌಂಟ್ ಪ್ಲಾನರ್ ಸುಧಾಂಶು, ಜಿಟಿಟಿಸಿ ಪ್ರತಿನಿಧಿ ವಿನಯ್ ಕುಮಾರ್ ಹಾಜರಿದ್ದರು.

ಅವಕಾಶ ಬಳಸಿಕೊಳ್ಳದಿದ್ದರೆ ಸರ್ಕಾರಕ್ಕೇನೂ ತೊಂದರೆ ಆಗುವುದಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉದ್ಯಮಿದಾರರಿಗೆ ನಷ್ಟವಾಗುತ್ತದೆ.
ಕೋಕಿಲಾ, ಮುಖ್ಯಸ್ಥೆ, ರಾಷ್ಟ್ರೀಯ ಎಸ್‌ಸಿ–ಎಸ್‌ಟಿ ಹಬ್‌ ಬೆಂಗಳೂರು ಶಾಖೆ

‘ಸುರಕ್ಷಿತ ತಲೆನೋವಿಲ್ಲ’

‘ಜಿಇಎಂ (ಸರ್ಕಾರಿ ಇ–ಮಾರುಕಟ್ಟೆ ಸ್ಥಳ) ಪೋರ್ಟಲ್‌ನಲ್ಲಿ ನೋಂದಾಯಿಸಿದರೆ ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಬಹುದು. ಇದನ್ನೂ ತಿಳಿಸಿಕೊಡಲಾಗುತ್ತದೆ. ಸರ್ಕಾರದೊಂದಿಗಿನ ವ್ಯವಹಾರ ಯಾವಾಗಲೂ ಸುರಕ್ಷಿತವಾದುದು ಹಾಗೂ ಹಣ ಬರಲಿಲ್ಲ ಎಂಬ ತಲೆನೋವು ಇರುವುದಿಲ್ಲ’ ಎಂದು ಕೋಕಿಲಾ ತಿಳಿಸಿದರು. ‘ಉದ್ಯಮಿಗಳು ದೇಶದ ವಿವಿಧೆಡೆ ನಡೆಯುವ ವಸ್ತುಪ್ರದರ್ಶನದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು–ಮಾರುಕಟ್ಟೆ ಕಂಡುಕೊಳ್ಳಲು ಕೂಡ ನೆರವು ಒದಗಿಸಲಾಗುವುದು. ಸರ್ಕಾರ ನೀಡುತ್ತಿರುವ ಸಹಾಯಧನ ಮೊದಲಾದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಬಳಸದಿದ್ದರೆ ಆ ಅವಕಾಶವನ್ನು ಸರ್ಕಾರ ಯಾವಾಗಲಾದರೂ ವಾಪಸ್ ಪಡೆದುಕೊಳ್ಳಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT