ಬೆಂಗಳೂರು: ಮೈಸೂರು ನಗರದ ಎರಡು ಕೆರೆಗಳನ್ನು ಪುನರುಜ್ಜೀವನಗೊಳಿಸುವ ಸಂಬಂಧ ಅಧ್ಯಯನ ನಡೆಸಲು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಮತ್ತು ಸಂಶೋಧನಾ ಸಂಸ್ಥೆಯನ್ನು(ನೀರಿ) ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮೈಸೂರು ನಗರದ ಕೆರಗಳ್ಳಿ (9 ಎಕರೆ 9 ಗುಂಟೆ) ಮತ್ತು ಅಜ್ಜಯನಹುಂಡಿ (10 ಎಕರೆ 32 ಗುಂಟೆ) ಕೆರೆಗಳಲ್ಲಿನ ಜಮೀನುಗಳ ಅತಿಕ್ರಮಣ ಸಂಬಂಧ ಎಂ.ಶಿವಕುಮಾರ್ ಮತ್ತು ಎಂ.ಸತೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ಜಾಗದಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಮೈಸೂರು ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಪ್ರಾಧಿಕಾರ, ನಗರ ಪಾಲಿಕೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.
‘ಅಧ್ಯಯನ ನಡೆಸಲು ನೀರಿಗೆ ವಹಿಸಿ, ಈ ಸಂಬಂಧ ಅನುಸರಣೆ ವರದಿಯನ್ನು ಏ.22ರೊಳಗೆ ಸಲ್ಲಿಸಬೇಕು’ ಎಂದು ಪೀಠ ತಿಳಿಸಿತು. ಎರಡು ರಸ್ತೆ ಹೊರತುಪಿಡಿಸಿ ಬೇರೆ ಅತಿಕ್ರಮಗಳಿಲ್ಲ ಎಂಬ ಸರ್ವೆ ವರದಿಯನ್ನು ಪೀಠ ಪರಿಶೀಲಿಸಿತು.
ಆಶ್ರಯ ಯೋಜನೆಯಡಿ ನಿವೇಶನಗಳ ಹಕ್ಕುಪತ್ರ ಪಡೆದವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಪೀಠ ವಿಲೇವಾರಿ ಮಾಡಿದೆ. ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಮೂಲಕ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದರು.
‘ಕೆರೆ ಜಾಗದಲ್ಲಿ ಯಾವುದೇ ವಸತಿ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಅಥವಾ ಯಾವುದೇ ಸಂಸ್ಥೆಗೆ ಅಧಿಕಾರ ಇಲ್ಲ. ಹಕ್ಕುಪತ್ರ ಪಡೆದವರು ಸೂಕ್ತ ಪರಿಹಾರಕ್ಕೆ ತಮ್ಮ ಹಕ್ಕು ಪ್ರತಿಪಾದಿಸಬಹುದು’ ಎಂದೂ ಪೀಠ ಹೇಳಿದೆ.