ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಣುಗೋಪಾಲ್‌ ಕೊಲೆ: ನನ್ನ ಮಗನ ವಿರುದ್ಧ ವಿನಾಕಾರಣ ಆರೋಪ– ಸಚಿವ ಮಹದೇವಪ್ಪ

Published 13 ಜುಲೈ 2023, 8:08 IST
Last Updated 13 ಜುಲೈ 2023, 8:08 IST
ಅಕ್ಷರ ಗಾತ್ರ

ಮೈಸೂರು: ‘ತಿ.ನರಸೀಪುರದಲ್ಲಿ ಈಚೆಗೆ ನಡೆದ ‘ಯುವ ಬ್ರಿಗೇಡ್’ ಸಂಚಾಲಕ ವೇಣುಗೋಪಾಲ್‌ ಹತ್ಯೆ ಪ್ರಕರಣವು ಧರ್ಮ ಹಾಗೂ ರಾಜಕೀಯದ ವ್ಯಾಪ್ತಿ ಎರಡಕ್ಕೂ ಬರುವುದಿಲ್ಲ. ಆದರೂ ಬಿಜೆಪಿಯವರು ನನ್ನ ಮಗ ಸುನೀಲ್‌ ಬೋಸ್ ಹೆಸರನ್ನು ವಿನಾಕಾರಣ ಎಳೆದು ತರುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

ಜಿಲ್ಲೆಯ ತಿ.ನರಸೀಪುರದಲ್ಲಿ ವೇಣುಗೋಪಾಲ್‌ ಕುಟುಂಬದವರಿಗೆ ಗುರುವಾರ ಸಾಂತ್ವನ ಹೇಳಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಯುವ ಬ್ರಿಗೇಡ್ ಸಂಘಟನೆ ಕಟ್ಟಿಕೊಂಡು ಹನುಮ ಜಯಂತಿಯನ್ನು ಚೆನ್ನಾಗಿಯೇ ಮಾಡಿದ್ದಾರೆ. ಅದಕ್ಕೆ ಯಾರ ಅಡ್ಡಿ ಅಥವಾ ತಕಾರರು ಇರಲಿಲ್ಲ. ಆ ಸಂಘಟನೆಯವರೇ ಬೈಕ್‌ ನಿಲುಗಡೆ ಹಾಗೂ ಫೋಟೊ ಹಾಕುವ ವಿಚಾರದಲ್ಲಿ ಜಗಳವಾಡಿದ್ದಾರೆ. ಕಾರ್ಯಕ್ರಮ ಮುಗಿದ ನಂತರವೂ ಗಲಾಟೆ ಮಾಡಿಕೊಂಡಿದ್ದಾರೆ. ಆ ವೇಳೆ ಕೊಲೆಯಾಗಿದೆ’ ಎಂದರು.

‘ಕೊಲೆ ಪ್ರಕರಣದಲ್ಲಿ ಹಿಂದುತ್ವದ ಕಾರ್ಯಸೂಚಿಯನ್ನು ಹಬ್ಬಿಸುವ ಸಂಚನ್ನು ಬಿಜೆಪಿ ಮಾಡುತ್ತಿದೆ. ಈ ಆಟ ಬಹಳ ಕಾಲ ನಡೆಯುವುದಿಲ್ಲ. ಎಲ್ಲದಕ್ಕೂ ಹಿಂದುತ್ವದ ಕಾರ್ಯಸೂಚಿ ಮುಂದು ಮಾಡುವುದು ಆ ಪಕ್ಷದವರ ಚಾಳಿ. ಸುಳ್ಳನ್ನು ಸತ್ಯ ಮಾಡಲು ಆ ಪಕ್ಷದವರು ಹೊರಟಿದ್ದಾರೆ. ನನ್ನ ಮಗನ ಮೇಲೆ ಹೀಗೆ ಹಿಂದೆಯೂ ವಿನಾಕಾರಣ ಆರೋಪ ಮಾಡಿದ್ದರು’ ಎಂದು ದೂರಿದರು.

‘ಪೊಲೀಸ್‌ ತನಿಖೆ ಸರಿ ದಾರಿಯಲ್ಲಿದೆ. ಘಟನೆಯಾದ ಕೆಲವೇ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದರು.

‘ಈ ಪ್ರಕರಣದಲ್ಲಿ ಬಿಜೆಪಿಯವರು ಧರ್ಮದ ಬಣ್ಣ ಬಳಿಯಲು ಹೊರಟಿದ್ದಾರೆ. ಇದು ದೌರ್ಜನ್ಯದ ಪ್ರಕರಣವಲ್ಲ. ಆದರೆ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಯಾರಾದರೂ ಈ ರೀತಿ ಕೊಲೆಯಾದರೆ ₹ 8 ಲಕ್ಷ ಪರಿಹಾರ ಕೊಡಬಹುದು. ಮೊದಲ ಕಂತಾಗಿ ₹ 4.12 ಲಕ್ಷವನ್ನು ಈಗ ಕುಟುಂಬದವರಿಗೆ ಕೊಟ್ಟಿದ್ದೇವೆ. ಪ್ರಕರಣದ ದೋಷಾರೋಪ ಪಟ್ಟಿ ಸಿದ್ಧವಾದ ಮೇಲೆ ಉಳಿದ ಹಣ ನೀಡುತ್ತೇವೆ. ವೇಣುಗೋಪಾಲ್‌ ಪತ್ನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

ಇದನ್ನೂ ಓದಿ: ನಾನೂ ಹನುಮ ಜಯಂತಿ ಮಾಡುವೆ, ನನ್ನನೂ ಸಾಯಿಸುತ್ತಾರೆ: ಕೊಲೆಯಾದ ವೇಣುಗೋಪಾಲ್ ಪತ್ನಿ ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT