ಮೈಸೂರು ಜಿಲ್ಲೆಯ ‘ದೊಡ್ಡಾಸ್ಪತ್ರೆ’ ಎಂದೇ ಜನಪ್ರಿಯವಾಗಿರುವ ಕೆ.ಆರ್.ಆಸ್ಪತ್ರೆಗೆ ಮೇಜರ್ ಸರ್ಜರಿ ನಡೆಸುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇತ್ತೀಚೆಗೆ ಹೇಳಿದ್ದರು. ಸಮಸ್ಯೆಗಳ ಕೂಪವಾಗಿರುವ ಆಸ್ಪತ್ರೆಯ ಮೂಲ ರೋಗಕ್ಕೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬುದು ರೋಗಿಗಳು, ವೈದ್ಯರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ. 1,041 ಹಾಸಿಗೆಗಳ ಸೌಲಭ್ಯ ಇರುವ ಆಸ್ಪತ್ರೆಗೆ ಪ್ರತಿದಿನ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ, ಮೂಲಸೌಕರ್ಯ, ವೈದ್ಯರು, ದಾದಿಯರು, ಸಹಾಯಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯ ಕೊರತೆಯಿಂದಾಗಿ ರೋಗಿಗಳು ಪರಿತಪಿಸುವಂತಾಗಿದೆ. ಕಾಯಂ ವೈದ್ಯಕೀಯ ಸೂಪರಿಂಟೆಂಡೆಂಟ್ಗಳನ್ನು ನೇಮಿಸುವುದು, ವೈದ್ಯರು, ದಾದಿಯರ ನೇಮಕ, ಔಷಧಗಳ ಸಮರ್ಪಕ ಪೂರೈಕೆಗೆ ಒತ್ತು ನೀಡಬೇಕು ಎಂಬುದು ರೋಗಿಗಳ ಆಗ್ರಹವಾಗಿದೆ.