ಪಿರಿಯಾಪಟ್ಟಣ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಿಗೆ ರಾಗಿ ಮಾರಿದ ರೈತರೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಗಿ ಮಾರಾಟ ಮಾಡಿ ಹಲವು ತಿಂಗಳು ಗತಿಸಿದರೂ; ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಯಾಗದಿರುವುದರಿಂದ ದಿಕ್ಕು ತೋಚ ದಂತಾಗಿದ್ದಾರೆ. ಸಕಾಲಕ್ಕೆ ಹಣ ಸಿಗ ದಿರುವುದರಿಂದ ಹೈರಾಣಾಗಿದ್ದಾರೆ.
ಮುಕ್ತ ಮಾರುಕಟ್ಟೆ ಬೆಲೆಗಿಂತ ಖರೀದಿ ಕೇಂದ್ರದಲ್ಲಿ ಹೆಚ್ಚಿನ ದರಕ್ಕೆ ರಾಗಿ ಖರೀದಿಸಿದ್ದರಿಂದ ಬಹುತೇಕರು ಇಲ್ಲಿಗೆ ತಮ್ಮ ಉತ್ಪನ್ನ ಮಾರಾಟ ಮಾಡಿದ್ದಾರೆ. ಇವರಲ್ಲಿ ಬಹುತೇಕರ ಖಾತೆಗೆ ಹಣ ಜಮೆಯಾಗದಿರುವುದು ಸಮಸ್ಯೆಗೆ ಕಾರಣವಾಗಿದೆ.
ತಾಲ್ಲೂಕಿನ 4000ಕ್ಕೂ ಹೆಚ್ಚು ರೈತರು 1,95,806 ಕ್ವಿಂಟಲ್ ರಾಗಿ ಯನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದಾರೆ. ಇದಕ್ಕೆ ಅಂದಾಜು ₹ 64 ಕೋಟಿ ಪಾವತಿಯಾಗಬೇಕಿದೆ. ರಾಗಿ ಖರೀದಿಸಿ ಮೂರು ತಿಂಗಳು ಕಳೆದರೂ, ಇದುವರೆಗೂ ರೈತರ ಖಾತೆಗೆ ಹಣ ಜಮೆಯಾಗಿಲ್ಲ.
‘ಇದೀಗ ಮುಂಗಾರು ಚುರುಕುಗೊಂಡಿದೆ. ಕೃಷಿ ಚಟುವಟಿಕೆ ಶುರುವಾಗಿವೆ. ಈ ವರ್ಷದ ಕೃಷಿ ಕೈಗೊಳ್ಳಲು ಕೈಯಲ್ಲಿ ಹಣವಿಲ್ಲದೆ ರೈತರು ಪರದಾಡುತ್ತಿದ್ದಾರೆ. ಶಾಸಕ ಕೆ.ಮಹದೇವ್, ಉಸ್ತುವಾರಿ ಸಚಿವ ಸೋಮಶೇಖರ್ ಗಮನಕ್ಕೆ ತಂದರೂ ಪ್ರಯೋಜನವಾಗದಾಗಿದೆ’ ಎನ್ನುತ್ತಾರೆ ಮಂಜು.
‘ಸಕಾಲದಲ್ಲಿ ಸರ್ಕಾರಕ್ಕೆ ಮಾಹಿತಿ ತಲುಪದ ಕಾರಣ ಈ ಬಾರಿ ತಾಲ್ಲೂಕಿನ ರೈತರಿಗೆ ಹಣ ಜಮೆಯಾಗಿಲ್ಲ’ ಎಂದು ಆಹಾರ ಶಿರಸ್ತೇದಾರ್ ಸಣ್ಣಸ್ವಾಮಿ ತಿಳಿಸಿದರು.