ಮೈಸೂರು: ‘ಸಾ.ರಾ.ಮಹೇಶ್ ನನಗೆ ಸರಿಸಾಟಿಯಲ್ಲ. ಪ್ರತಿಸ್ಪರ್ಧಿಯೂ ಅಲ್ಲ. ಅವನ ಪ್ರಶ್ನೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದರು.
‘ನನ್ನ ನಾಮನಿರ್ದೇಶನವನ್ನು ಪ್ರಶ್ನಿಸಿ ಆತ ರಾಜ್ಯಪಾಲರಿಗೆ ಪತ್ರ ಬರೆದಿದ್ದರೆ ನನಗೇನೂ ಸಮಸ್ಯೆ ಇಲ್ಲ. ನಾಮನಿರ್ದೇಶನದ ಬಗ್ಗೆ ಕಾನೂನಿನ ತೊಡಕಿದ್ದರೆ ಅದನ್ನು ರಾಜ್ಯಪಾಲರೇ ತಿಳಿಸುತ್ತಾರೆ’ ಎಂದು ಮೈಸೂರಿನಲ್ಲಿ ಭಾನುವಾರ ಮಾಧ್ಯಮದವರಿಗೆ ತಿಳಿಸಿದರು.
‘ವಿಶ್ವನಾಥ್ ಅವರನ್ನು ಸಾಹಿತ್ಯ ಕೋಟಾದಡಿ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವುದು ಕಾನೂನುಬಾಹಿರ. ಸದರಿ ನಾಮನಿರ್ದೇಶನದ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
ಸಾಧನೆಯನ್ನು ಕೋವಿಡ್ ಮುಚ್ಚಿಹಾಕಿದೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತಮ ತಂಡವನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರ ಒಂದು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಕೋವಿಡ್ ಮುಚ್ಚಿಹಾಕಿದೆ ಎಂದು ವಿಶ್ವನಾಥ್ ಹೇಳಿದರು.