ಮೈಸೂರು: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾನ್ ದೇಶಪ್ರೇಮಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ತಾಲ್ಲೂಕಿನ ಉತ್ತನಹಳ್ಳಿಯ ಮಾರಮ್ಮ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
‘ಸಂಗೊಳ್ಳಿ ರಾಯಣ್ಣ ಜನಿಸಿದ್ದು ಆ.15ರಂದು. ಆತನನ್ನು ನೇಣು ಹಾಕಿದ್ದು ಜ. 26. ಅಂದೇ ನಮ್ಮ ಸಂವಿಧಾನ ಜಾರಿಗೆ ಬಂದಿತು. ರಾಯಣ್ಣ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು’ ಎಂದು ಹೇಳಿದರು.
‘ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯಲ್ಲಿ ರಾಯಣ್ಣನ ಹೆಸರಿನಲ್ಲಿ 110 ಎಕರೆ ಜಾಗ ನೀಡಿ ಅಲ್ಲಿ ಸೈನಿಕ ಶಾಲೆಯನ್ನು ತೆರೆಯಲಾಗಿದೆ. ರಾಕ್ ಗಾರ್ಡನ್, ವಸ್ತುಸಂಗ್ರಹಾಲಯ ಮಾಡಲಾಗಿದ್ದು, ₹ 285 ಕೋಟಿ ವೆಚ್ಚವಾಗಿದೆ. ರಾಯಣ್ಣನ ಸ್ಮರಣಾರ್ಥ ಇದೆಲ್ಲವನ್ನೂ ಮಾಡಲಾಗಿದ್ದು, ಜನರು ಅಲ್ಲಿಗೆ ಭೇಟಿ ಕೊಡಬೇಕು’ ಎಂದು ಸಲಹೆ ನೀಡಿದರು.
ಗ್ರಾಮದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಭವನದ ಉದ್ಘಾಟನೆ ನೆರವೇರಿಸಿದರು. ಕನಕದಾಸ ಮತ್ತು ಸಂಗೊಳ್ಳಿರಾಯಣ್ಣ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನೂತನ ಪಶು ಚಿಕಿತ್ಸಾಲಯವನ್ನು ಉದ್ಘಾಟಿಸಿದರು.
ಹರಸಿದ ಮಹಿಳೆ
ಉತ್ತನಹಳ್ಳಿಯ ಜ್ವಾಲಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ವಾಪಸಾಗುತ್ತಿದ್ದ ಮುಖ್ಯಮಂತ್ರಿಯನ್ನು ಮಹಿಳೆಯೊಬ್ಬರು ‘ಅನ್ನ ಕೊಟ್ಟ ದೇವರು ನೀನು, ಚೆನ್ನಾಗಿರಪ್ಪ’ ಎಂದು ಹರಸಿದರು. ಸಿದ್ದರಾಮಯ್ಯ ಅವರು ಕಾರು ಹತ್ತುವಾಗ ಆ ಮಹಿಳೆ ಕೈಮುಗಿದು ಆಶೀರ್ವದಿಸಿದರು.