ಮೈಸೂರು: ದಸರಾ ಅಂಗವಾಗಿ ಅ.5ರಂದು ಅಂಬಾವಿಲಾಸ ಅರಮನೆ ಆವರಣದಲ್ಲಿ ಚಾಲನೆ ಪಡೆಯಲಿರುವ ವಿಜಯದಶಮಿ ಮೆರವಣಿಗೆಗೆ ಜಿಲ್ಲಾಡಳಿತದಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2ನೇ ಬಾರಿಗೆ, ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಿದ್ದಾರೆ. ಇದಕ್ಕಾಗಿ ವಿಶೇಷ ವೇದಿಕೆ ನಿರ್ಮಿಸಲಾಗುತ್ತಿದೆ. ಅರಮನೆ ಆವರಣದಲ್ಲಿ ಅತಿ ಗಣ್ಯರು, ಗಣ್ಯರು, ಆಹ್ವಾನಿತರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್ ಖರೀದಿಸಿದವರಿಗೆ ಪ್ರತ್ಯೇಕವಾಗಿ ಆಸನಗಳನ್ನು ಹಾಕಲಾಗುತ್ತದೆ.
ಸಾರ್ವಜನಿಕರು ವೀಕ್ಷಿಸುವುದಕ್ಕಾಗಿ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ದಿಂದ ನಗರ ಬಸ್ ನಿಲ್ದಾಣದ ಕಡೆಗೆ ಸಂಪರ್ಕಿಸುವ ಪಾದಚಾರಿ ಮಾರ್ಗದಲ್ಲಿ, ಕೆ.ಆರ್.ವೃತ್ತದಲ್ಲಿ ನಗರಪಾಲಿಕೆಯಿಂದ ವ್ಯವಸ್ಥೆ ಮಾಡಲಾಗುತ್ತಿದೆ.
ಉದ್ಘಾಟನೆ ವೇಳೆ, ವಿಶೇಷ ವೇದಿಕೆಯಲ್ಲಿ ಶಿಷ್ಟಾಚಾರದಂತೆ ಮುಖ್ಯಮಂತ್ರಿ ಸೇರಿ 8 ಮಂದಿ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಸಚಿವರು, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಶಿವಕುಮಾರ್ ವೇದಿಕೆ ಏರಲಿದ್ದಾರೆ. ಉಳಿದ ಜನಪ್ರತಿನಿಧಿಗಳಿಗೆ ಪ್ರತ್ಯೇಕವಾಗಿ ಆಸನದ ವ್ಯವಸ್ಥೆ ಇರಲಿದೆ.
ನಂದಿ ಧ್ವಜ, ವೀರಗಾಸೆ, ನಾದಸ್ವರ, ನೌಫತ್, ನಿಶಾನೆ ಆನೆಗಳು, ಎನ್ಸಿಸಿ, ಸ್ಕೌಟ್ಸ್, ಗೈಡ್ಸ್, ವಿವಿಧ ಪೊಲೀಸ್ ತುಕಡಿಗಳು, ಅಶ್ವಾರೋಹಿ ದಳ ಮೆರವಣಿಗೆ ಮೆರುಗು ಹೆಚ್ಚಿಸಲಿವೆ. ನಗರದ ಪ್ರಥಮ ಪ್ರಜೆ ಶಿವಕುಮಾರ್ ಕುದುರೆ ಸವಾರಿ ಮಾಡುತ್ತಾ ಪಾಲ್ಗೊಳ್ಳಲಿದ್ದಾರೆ.
ಎರಡು ವರ್ಷಗಳ ನಂತರ ಬನ್ನಿಮಂಟಪದವರೆಗೆ ಅಂಬಾರಿ ಮೆರವಣಿಗೆ ಸಾಗಲಿದ್ದು, ಚಾಮರಾಜ ವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ಹೈವೆ ವೃತ್ತದ ಮೂಲಕ ಮೆರವಣಿಗೆಯು 5 ಕಿ.ಮೀ. ಕ್ರಮಿಸಲಿದೆ.
ಪಂಜಿನ ಕವಾಯತಿನಲ್ಲಿ ರಾಜ್ಯಪಾಲರು ಗೌರವ ವಂದನೆ ಸಲ್ಲಿಸುವುದು ಸಂಪ್ರದಾಯ. ಆದರೆ, ರಾಜ್ಯಪಾಲರು ಕೋವಿಡ್ ಬಾಧಿತರಾಗಿ ರುವುದರಿಂದಾಗಿ ಅಧಿಕೃತ ಪ್ರವಾಸ ಕಾರ್ಯಕ್ರಮ ಪಟ್ಟಿ ಸೋಮವಾರ ಸಂಜೆವರೆಗೂ ಬಂದಿರಲಿಲ್ಲ.
ಮೆರವಣಿಗೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.