ಹುಣಸೂರು (ಮೈಸೂರು ಜಿಲ್ಲೆ): ಹುಣಸೂರು ತಾಲ್ಲೂಕಿನ ನಾಲ್ಕು ಕಡೆಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳ ಮೇಲೆ ಭಾನುವಾರ ಸಂಜೆ ಕಲ್ಲು ತೂರಾಟ ನಡೆದಿದೆ. ಕಿಟಕಿಗಳ ಗಾಜುಗಳು ಪುಡಿಯಾಗಿದ್ದು, ಬಸ್ಸೊಂದರಲ್ಲಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ.
ಬನ್ನಿಕುಪ್ಪೆ ಬಳಿ ಬಸ್ ಮೇಲೆ ಕಲ್ಲು ತೂರಿ ಜಖಂಗೊಳಿಸಿದ ಪ್ರಕರಣ ಸಂಬಂಧ, ಹುಣಸೂರು ಬಸ್ ಡಿಪೊ ಮೆಕ್ಯಾನಿಕ್ ವಿಭಾಗದ ಕೃಷ್ಣಮೂರ್ತಿ ಹಾಗೂ ಸಂತೋಷ ಭಜಂತ್ರಿ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ, ಡಿಪೊ ವ್ಯವಸ್ಥಾಪಕ ವಿಪಿನ್ ಕೃಷ್ಣ ಅವರು ಹುಣಸೂರು ಗ್ರಾಮಾಂತರ ಮತ್ತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲು: ಮೈಸೂರು ಹೊರವಲಯದ ಹಿನಕಲ್ನಲ್ಲಿರುವ ವಿಜಯನಗರ ಬಸ್ ಡಿಪೋಕ್ಕೆ ಬರುತ್ತಿದ್ದ ನೌಕರರನ್ನು ತಡೆದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಾರಿಗೆ ಸಂಸ್ಥೆಯ ನೌಕರರಾದ ವಿಶ್ವನಾಥ್, ಲೋಕೇಶ್, ಮಂಜುನಾಥ್ ಎಂಬುವವರ ವಿರುದ್ಧ ವಿಜಯನಗರ ಡಿಪೋ ವ್ಯವಸ್ಥಾಪಕ ನಟರಾಜು ದೂರು ದಾಖಲಿಸಿದ್ದಾರೆ.