ಮೈಸೂರು: ವಿಜಯನಗರ ಠಾಣೆ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ₹ 21.45 ಲಕ್ಷ ಮೌಲ್ಯದ 12 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹಿನಕಲ್ ನಿವಾಸಿ ಎ.ಸ್ಟ್ಯಾನ್ಲಿ ಹಾಗೂ ಸೋಮವಾರಪೇಟೆ ತಾಲ್ಲೂಕು ಮುಳ್ಳುಸೋಗೆ ಗ್ರಾಮದ ನಿವಾಸಿ ಕೆ.ಕೆ.ಧನುಷ್ ಎಂಬವರೇ ಬಂಧಿತ ಆರೋಪಿಗಳು.
ಇವರು 2 ದಿನಗಳ ಹಿಂದೆ ಹೂಟಗಳ್ಳಿಯ ಸಿಗ್ನಲ್ ಲೈಟ್ ಬಳಿ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್ ನಿಲ್ಲಿಸಿಕೊಂಡು ನಿಂತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಪ್ರಕರಣಗಳು ಗೊತ್ತಾಗಿವೆ. ಐಷಾರಾಮಿ ಜೀವನಕ್ಕಾಗಿ ಇವರು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು: ಇಲ್ಲಿನ ಸಾಗರಕಟ್ಟೆಯ ಸೇತುವೆ ಬಳಿ ಯುವಕ ಮತ್ತು ಯುವತಿ ಇಬ್ಬರೂ ನೀರಿಗೆ ಬಿದ್ದಿದ್ದು, ನಾಪತ್ತೆಯಾಗಿದ್ದಾರೆ. ಇವರಿಗಾಗಿ ಹುಡುಕಾಟ ನಡೆದಿದೆ.
ವಿಜಯನಗರದ ನಿವಾಸಿ ಶಿವಕುಮಾರ್ (24) ಮತ್ತು ಹೂಟಗಳ್ಳಿಯ ರಂಜಿತಾ (21) ನೀರಿಗೆ ಬಿದ್ದವರು ಎಂದು ಗುರುತಿಸಲಾಗಿದೆ.
ಶಿವಕುಮಾರ್ ಕಾರಿನಲ್ಲಿ ಬಂದರೆ, ರಂಜಿತಾ ಸ್ಕೂಟರ್ನಲ್ಲಿ ಬಂದಿದ್ದಾರೆ. ಮಾತನಾಡುತ್ತ ಕುಳಿತಿದ್ದ ಇಬ್ಬರೂ ಏಕಾಏಕಿ ಜಗಳ ಆರಂಭಿಸಿದ್ದಾರೆ. ನಂತರ, ಮೊದಲು ರಂಜಿತಾ ನೀರಿಗೆ ಹಾರಿದ್ದಾರೆ. ಬಳಿಕ ಶಿವಕುಮಾರ್ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಇವರ ಪತ್ತೆಗೆ ಶೋಧ ಕಾರ್ಯ ನಡೆದಿದೆ.