‘ಸ್ಮಶಾನದಲ್ಲಿ ಕಸದ ತೊಟ್ಟಿಯ ಅಗತ್ಯವಿದೆ. 2 ಕೊಳವೆ ಬಾವಿಗಳಿದ್ದರೂ ಒಂದರಲ್ಲಿ ನೀರು ಬರುತ್ತಿಲ್ಲ. ದುರಸ್ತಿ ಯಾಗಬೇಕು. ಮಳೆನೀರು ಸಂಗ್ರಹ ವಾದರೆ ಅಂತರ್ಜಲ ಹೆಚ್ಚುತ್ತದೆ. ಆದರೆ, ಒಳಚರಂಡಿ ದುರಸ್ತಿಯಾಗಬೇಕು’ ಎನ್ನುವ ಬೇಡಿಕೆಯನ್ನು ಗಾಂಧಿನಗರ ಸ್ಮಶಾನದ ಕಾವಲುಗಾರ ಪಳನಿಸ್ವಾಮಿ ಮುಂದಿಡುತ್ತಾರೆ.
ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸೌದೆ, ಬೆರಣಿಯಿಂದ ಸುಟ್ಟ ಮೇಲೆ ಮರುದಿನ ಸಂಬಂಧಿಕರು ಸ್ವಲ್ಪ ಬೂದಿ ಒಯ್ಯುತ್ತಾರ. ಉಳಿದ ಬೂದಿ, ಮೂಳೆ ಹಾಗೆಯೇ ಇರುತ್ತವೆ. ನಾಯಿ, ಇತರ ಪ್ರಾಣಿಗಳು ಚೆಲ್ಲಾಪಿಲ್ಲಿ ಮಾಡುತ್ತವೆ. ಇದರ ವಿಲೇವಾರಿ ಅಗತ್ಯವಾಗಿದೆ ಎನ್ನುವ ಮನವಿ ಅಗ್ರಹಾರದ ಸರೋಜಮ್ಮ ಅವರದು.
ಕಾವಲುಗಾರರ ಸಮಸ್ಯೆ: 38 ಸ್ಮಶಾನಗಳಿಗೆ ಕೇವಲ 18 ಕಾವಲುಗಾರರಿದ್ದಾರೆ. ತಲಾ ಕಾವಲುಗಾರರಿಗೆ 3–4 ಸ್ಮಶಾನಗಳ ನಿರ್ವಹಣೆಯ ಜವಾಬ್ದಾರಿ ನೀಡಲಾಗಿದೆ. ಇದರಿಂದ ಸರಿಯಾಗಿ ನಿಗಾ ವಹಿಸಲಾಗುತ್ತಿಲ್ಲ. ಸಂಜೆ 6 ಗಂಟೆಯ ನಂತರ ಕಾವಲುಗಾರರು ಇರುವುದಿಲ್ಲ. ಹಾಗಾಗಿ ಶವ ಸಂಸ್ಕಾರಕ್ಕೆ ಮರುದಿನದವರೆಗೆ ಕಾಯಬೇಕು. ಇದಕ್ಕಾಗಿ ರಾತ್ರಿ ಪಾಳಿ ನಿರ್ವಹಿಸುವ ಕಾವಲುಗಾರರ ಅಗತ್ಯವಿದೆ ಎನ್ನುತ್ತಾರೆ ಸಾಂಖಿಕ ಅಧಿಕಾರಿ ಎಚ್.ಎಸ್.ಶರ್ಮಾ.
ಹೂಳಲು, ಅನಿಲ ಸಂಸ್ಕಾರ ಉಚಿತವಿದೆ. ಸೌದೆ ಹಾಗೂ ಬೆರಣಿಯಿಂದ ಸುಡಲು ₹ 100 ದರ ನಿಗದಿಗೊಳಿಸಲಾಗಿದೆ. ಆದರೆ, ಸೌದೆ, ಬೆರಣಿಯನ್ನು ಸಂಬಂಧಿಕರೇ ತರಬೇಕು.
ಸಂಜೆ 6 ಗಂಟೆಯ ನಂತರ ಸಂಸ್ಕಾರ ನಡೆಸಿದರೆ ಮೃತರಾದವರ ಹೆಸರು ದಾಖಲಾಗುವುದಿಲ್ಲ. ಇದಕ್ಕಾಗಿ ರಸೀದಿ ಕೊಡುವ ವ್ಯವಸ್ಥೆ ಜಾರಿಗೊಳಿಸುತ್ತೇವೆ. ಇದರಿಂದ ಖಚಿತವಾಗಿ ಮೃತಪಟ್ಟವರ ಸಂಖ್ಯೆ ದಾಖಲಾಗುತ್ತದೆ ಎಂದು ಅನಿಲ್ ಕ್ರಿಸ್ಟಿ ವಿವರಿಸಿದರು.