ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ದಂಚಿನ ಹೊಲದಲ್ಲಿ ಬೆಳೆದ ಫಸಲಿನ ಮೇಲೆ ಕಾಡಾನೆ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಫಸಲು ನಾಶ ಮಾಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶನಿವಾರ ತಡರಾತ್ರಿ 8 ಕಾಡಾನೆ ಇದ್ದ ಹಿಂಡು ಕಾಳಬೂಚನಹಳ್ಳಿ ಗ್ರಾಮದ ಹೊಲಗಳಲ್ಲಿ ದಾಳಿ ನಡೆಸಿ ರಾಗಿ ಮತ್ತು ಮುಸುಕಿನಜೋಳ ಸಂಪೂರ್ಣ ನಾಶ ಮಾಡಿದೆ. ಗ್ರಾಮಸ್ಥರು ಆನೆ ಓಡಿಸುವ ಪ್ರಯತ್ನ ನಡೆಸಿದಾಗ ಆನೆ ಹಿಂಡು ಎರಡು ಗುಂಪಾಗಿ ಕೆಲವು ಆನೆ ಕಾಡಿಗೆ ತೆರಳಿದರೆ 2 ಆನೆ ಹಿಂಡಿನಿಂದ ಬೇರ್ಪಟ್ಟು ದಾಂದಲೆ ನಡೆಸಿದೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿ ಆನೆ ದಾಳಿಯಿಂದ ನಾಶವಾಗಿರುವ ಫಸಲಿಗೆ ಪರಿಹಾರ ನೀಡಲು ಒತ್ತಾಯಿಸಿದ್ದಾರೆ.
ತರಕಾರಿ ನಾಶ
ನಂಜನಗೂಡು: ಏಳು ಕಾಡಾನೆಗಳ ಹಿಂಡು ರೈತರೊಬ್ಬರ ಜಮೀನಿನಲ್ಲಿ ಬೆಳೆಯಲಾಗಿದ್ದ ತರಕಾರಿ ಬೆಳೆಗಳನ್ನು ನಾಶಗೊಳಿಸಿರುವ ಘಟನೆ ತಾಲ್ಲೂಕಿನ ಕೆಲ್ಲೂಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ನಿವಾಸಿ ನಾಗರಾಜು ಎಂಬುವರಿಗೆ ಸೇರಿದ ನಾಲ್ಕು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯನ್ನು ಬೆಳೆಯಲಾಗಿದ್ದು ಭಾನುವಾರ ಬೆಳಗಿನ ಕಾಡಾನೆಗಳ ಹಿಂಡು ಜಮೀನಿಗೆ ದಾಳಿ ಇಟ್ಟು ಹೊಲದಲ್ಲಿ ಬೆಳೆಯಲಾಗಿದ್ದ ತರಕಾರಿ ಬೆಳೆ ಹಾಗೂ ಕೊಳವೆ ಬಾವಿಯ ಪೈಪ್ಗಳನ್ನು ತುಳಿದು ನಾಶಗೊಳಿಸಿವೆ.
ಕಾಡಾನೆ ದಾಳಿಯ ಮಾಹಿತಿ ಪಡೆದು ಬೆಳಿಗ್ಗೆ 6ರ ಸಮಯದಲ್ಲಿ ಸ್ಥಳಕ್ಕೆ ಬಂದ ಸ್ಥಳೀಯ ಗ್ರಾಮಸ್ಥರು ಪಟಾಕಿ ಸಿಡಿಸಿ ಆನೆಗಳನ್ನು ಹೊಲದಿಂದ ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನೆ ದಾಳಿಯ ಕುರಿತು ಮಾಹಿತಿ ನೀಡಿದ ರೈತ ನಾಗರಾಜು ಗ್ರಾಮದಲ್ಲಿ ಆನೆಗಳ ಹಾವಳಿ ವ್ಯಾಪಕವಾಗಿದ್ದು ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.