ರಾಮನಗರ: ಇಲ್ಲಿನ ಜಾನಪದ ಲೋಕದಲ್ಲಿ ಡಣಾಯಕನಪುರದ ಲಕ್ಷ್ಮೀ ನರಸಿಂಹಸ್ವಾಮಿ ಕಲಾ ತಂಡದವರು ಪಟ ಕುಣಿತವನ್ನು ಪ್ರದರ್ಶಿಸಿದರು.
‘ನಮ್ಮದು ಕಲಾವಿದರ ಕುಟುಂಬ. ಜನಪದ ಕಲೆಗಳ ಪ್ರದರ್ಶನ ನೀಡುವ ಮೂಲಕವೇ ಈಗಲೂ ಜೀವನ ನಡೆಸುತ್ತಿದ್ದೇವೆ’ ಎಂದು ಹಿರಿಯ ತಮಟೆ ಕಲಾವಿದ ಚಿಕ್ಕನರಸಯ್ಯ ತಿಳಿಸಿದರು.
‘ಈಚಿನ ವರ್ಷಗಳಲ್ಲಿ ಕಲೆಗಳ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿಲ್ಲ. ಸರ್ಕಾರದ ವತಿಯಿಂದಲೂ ಪ್ರೋತ್ಸಾಹ ದೊರೆಯುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅವಕಾಶ ನೀಡಿದ ತಂಡಗಳಿಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಹಲವು ಮಂದಿ ಕಲಾವಿದರಿಗೆ ಜೀವನ ನಡೆಸಲು ಕಷ್ಟವಾಗಿದೆ’ ಎಂದರು.
‘ಇಲಾಖೆಯವರು ಎಲ್ಲ ಕಲಾ ತಂಡಗಳಿಗೂ ಅವಕಾಶ ನೀಡಬೇಕು. ಕೆಲವರಿಗೆ ಮಾತ್ರ ನೀಡಲಾಗುತ್ತಿದೆ. ಇದರಿಂದ ನೈಜ ಕಲಾವಿದರು ಪ್ರದರ್ಶನದಿಂದ ವಿಮುಖರಾಗುತ್ತಿದ್ದಾರೆ’ ಎಂದು ಅವರು ಹೇಳಿದರು.
‘ಈ ಬಾರಿಯ ನವೆಂಬರ್ ತಿಂಗಳಿನಲ್ಲಿಯೂ ಕಾರ್ಯಕ್ರಮಗಳು ಸಿಗಲಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಕಲೆಗಳು ನಶಿಸಿ ಹೋಗುತ್ತವೆ’ ಎಂದು ಎಚ್ಚರಿಸಿದರು.
ಪಟ ಕುಣಿತದ ಕಲಾವಿದರಾದ ರಾಮಚಂದ್ರಯ್ಯ, ಮೋಟಪ್ಪ, ದೇವರಾಜು, ರಮೇಶ್, ರಾಮಲಿಂಗಯ್ಯ, ನರಸಿಂಹಯ್ಯ, ತಮಟೆ ಕಲಾವಿದರಾದ ನರಸಿಂಹಮೂರ್ತಿ, ಗಂಗಾಧರ, ಕೆ. ಮಹೇಶ್, ಗವಿಸಿದ್ದಯ್ಯ, ರವೀಶ, ಪ್ರೇಮ್ ಇದ್ದರು.