ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಆ.5ರ ಸಂಜೆ 5ಕ್ಕೆ ಕೆಳದಿ ಪ್ರಭು ಶಿಸ್ತಿನ ಶಿವಪ್ಪನಾಯಕ ಪ್ರತಿಷ್ಠಾನದಉದ್ಘಾಟನೆ, ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಅರಸರ ಚರಿತ್ರೆ ಅವಿಸ್ಮರಣೀಯ. ವಿಜಯನಗರ ಸಾಮ್ರಾಜ್ಯ ಪತನದ ನಂತರ ಕೆಳದಿ ಸಾಮ್ರಾಜ್ಯವನ್ನು 16 ಅರಸರು, ಇಬ್ಬರು ರಾಣಿಯರು ಕ್ರಿ.ಶ.1562 ರಿಂದ ಕ್ರಿ.ಶ.1763ರವರೆಗೆ ಆಳಿದ್ದಾರೆ. ಅವರಲ್ಲಿ ಶಿಸ್ತಿನ ಶಿವಪ್ಪ ನಾಯಕ ಕೂಡ ಒಬ್ಬರು. ಇಂತಹ ಸಾಮ್ರಾಜ್ಯದ ಇತಿಹಾಸ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಪ್ರತಿಷ್ಠಾನ ಸ್ಥಾಪಿಸಲಾಗಿದೆ ಎಂದು ಸಂಯೋಜಕ ಕತ್ತಿಗೆ ಚನ್ನಪ್ಪ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಕೆಳದಿ ಚರಿತ್ರೆಯ ಮೇಲೆ ವಿದ್ಯಾರ್ಥಿಗಳು, ಸಂಶೋಧಕರು ಹೆಚ್ಚಿನ ಬೆಳಕು ಚೆಲ್ಲಬೇಕು. ಕೆಳದಿ ಸಮಕಾಲಿನ ಇತರ ರಾಜ್ಯಗಳ ಇತಿಹಾಸ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದರು.
ಅಂದು ನಡೆಯುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕವಲೆದುರ್ಗ ಮಹಾಮತ್ತಿನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಇತಿಹಾಸ ತಜ್ಞ ಡಾ.ಅ.ಸುಂದರ್ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಭಾಗವಹಿಸುವರು.ಇತಿಹಾಸ ತಜ್ಞೆ ಅನುಮಾಕ್ಷಿ ಗೋಗಿ ಕೆಳದಿ ವೀರರಾಣಿ ಚೆನ್ನಮ್ಮಾಜಿ ಕುರಿತು ವಿಶೇಷ ಉಪನ್ಯಾಸ ನೀಡುವರು. ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆಳದಿ ವೀರರಾಣಿ ಚೆನ್ನಮ್ಮಾಜಿ ಮಹಿಳಾ ವೇದಿಕೆ ಸದಸ್ಯರು ಚೆನ್ನಮ್ಮಾಜಿ ರೂಪಕ ಪ್ರದರ್ಶಿಸುವರು ಎಂದು ಎಂದು ವಿವರ ನೀಡಿದರು.