ಶಿವಮೊಗ್ಗ: ನವುಲೆ, ತ್ರಿಮೂರ್ತಿನಗರದ ಸಮೀಪ ಇರುವ ಕೆರೆ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ನಗರ ಪಾಲಿಕೆ ವ್ಯಾಪ್ತಿಯ 3ನೇ ವಾರ್ಡ್ನ ಸರ್ವೆ ನಂಬರ್ 110ರಲ್ಲಿ 6 ಎಕರೆ ಜಾಗದಲ್ಲಿ ಕೆರೆ ಇದೆ. ಈ ಜಾಗವನ್ನು ಕೆಲವರು ಲೇಔಟ್ ಮಾಡಲು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ ನಾಗರಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಜನರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಒತ್ತುವರಿ ತೆರವಿಗೆ ಆದೇಶ ನೀಡಿದೆ ಎಂದು ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೆರೆ ಒತ್ತುವರಿ ಮಾಡಿರುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ನಗರ, ಗ್ರಾಮೀಣ ಪ್ರದೇಶದಲ್ಲಿ ಇಧೆ ರೀತಿ ಒತ್ತುವರಿಯಾಗಿರುವ ಎಲ್ಲ ಕೆರೆಗಳನ್ನೂ ತೆರವುಗೊಳಿಸಬೇಕು. ಭೂ ಕಬಳಿಕೆ ನಿಷೇಧ ಕಾಯ್ದೆ- ಅನ್ವಯ ಸೂಕ್ತ ಕ್ರಮ ಕೈಗೊಂಡು, ಕೆರೆಗಳನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತ್ರಿಮೂರ್ತಿ ನಗರ ನಿವಾಸಿಗಳ ಸಂಘದ ಅಧ್ಯಕ್ಷ ರಘುಪತಿ, ಟೈಲ್ಸ್ ನಾಗರಾಜ್, ಮನೋಹರ್ ನಾಯಕ್, ಶ್ರೀಧರ್ ಉಪಸ್ಥಿತರಿದ್ದರು.