ದೇವದುರ್ಗ: ತಾಲ್ಲೂಕಿನ ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟಿದ್ದ ಹನುಮಂತನ ಕುಟುಂಬಕ್ಕೆ ಸಚಿವ ಎನ್. ಎಸ್. ಬೋಸರಾಜ ಭಾನುವಾರ ಭೇಟಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದ ಸಿಎಂ ಪರಿಹಾರ ನಿಧಿಯಿಂದ ₹5 ಲಕ್ಷ ರೂ ಚೆಕ್ ವಿತರಿಸಿ ಕುಟುಂಬಕ್ಕೆ ಸ್ವಾಂತನ ಹೇಳಿದರು.
ನಂತರ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಾದ್ಯಂತ ರೇಖಲಮರಡಿ ಮತ್ತು ಗೋರೆಬಾಳ ಪ್ರಕರಣ ಮರಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಸೂಚಿಸಿದ್ದೇನೆ. ಗ್ರಾಮ ಪಂಚಾಯಿತಿಯ ಅಧಿಕಾರಿಗಳ ನಿರ್ಲಕ್ಷದಿಂದ ಇತರ ಘಟನೆಗಳು ಜರುಗುತ್ತಿದ್ದು ಗ್ರಾಮ ಪಂಚಾಯತಿಯ ಸಿಬ್ಬಂದಿಯೊಂದಿಗೆ ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯ ಸಹಕಾರದಿಂದ ಇಂತಹ ಪ್ರಕರಣ ತಡೆಯಲು ಸಾಧ್ಯ ಎಂದರು.
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಸೋಮವಾರ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುವಂತೆ ಸೂಚಿಸುತ್ತೇನೆ ಎಂದರು.
ದೇವದುರ್ಗ ಶಾಸಕಿ ಕರೇಮ್ಮ ಜಿ ನಾಯಕ, ಮಾನವಿ ಶಾಸಕ ಹಂಪಯ್ಯ ನಾಯಕ, ರಾಜಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ್ ಕುರೇರಾ, ಸಹಾಯಕ ಆಯುಕ್ತ ರಜಿನಿಕಾಂತ್ ಚೌಹಾಣ್, ತಹಶೀಲ್ದಾರ ಕೆ ವೈ ಬೀದರಿ, ಇಒ ಪಂಪಾಪತಿ ಹಿರೇಮಠ, ತಾಲ್ಲೂಕು ಆರೋಗ್ಯಾಧಿಕಾರಿ ಡಾ ಬನದೇಶ್ವರ ಸೇರಿದಂತೆ ಇತರರು ಇದ್ದರು.