ರಾಯಚೂರು: 'ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು' ಎಂದು ನಟ ಶಿವರಾಜಕುಮಾರ್ ಹೇಳಿದರು.
ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 'ವೇದ' ಸಿನಿಮಾ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ನನ್ನನ್ನು ಭೇಟಿಯಾದ ರಾಯಚೂರು ಜನರು ಇಲ್ಲಿರುವ ಸಮಸ್ಯೆಗಳು ಮತ್ತು ಹೋರಾಟಗಳ ಬಗ್ಗೆ ಯಾವತ್ತು ಹೇಳಿಲ್ಲ. ರಾಯಚೂರಿನಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗಲೇ ಜನರ ಬೇಡಿಕೆ ಗೊತ್ತಾಗಿದೆ' ಎಂದರು.
'ಈ ಭಾಗದಲ್ಲಿ ನಡೆಯುವ ನೆಲ, ಜಲ ಪರ ಹೋರಾಟಗಳನ್ನು ಕನ್ನಡ ಚಿತ್ರರಂಗ ಬೆಂಬಲಿಸುತ್ತದೆ ಎಂಬುದನ್ನು ಎಲ್ಲ ಕಲಾವಿದರ ಪರವಾಗಿ ನಾನು ಮಾತು ಕೊಡುತ್ತೇನೆ' ಎಂದು ಘೋಷಿಸಿದರು.
'ಮಂತ್ರಾಲಯದಲ್ಲಿ ರಾಯರ ದರ್ಶನ ಮಾಡಿದ್ದು ತುಂಬಾ ಸಂತೃಪ್ತಿ ನೀಡಿದೆ. ಇನ್ನು ಮುಂದೆಯೂ ರಾಯಚೂರಿಗೆ ಬರುತ್ತೇನೆ' ಎಂದು ಹೇಳಿದರು.