ರಾಯಚೂರು: ತಾಲ್ಲೂಕಿನ ಬಿಚ್ಚಾಲಿ ಗ್ರಾಮ ಪಂಚಾಯಿತಿಯಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
2018ರ ಫೆಬ್ರುವರಿ 16ರಂದು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಾಗಿದ್ದು, ಸಣ್ಣ– ಪುಟ್ಟ ಬಿಲ್ ಪಾವತಿ ಮಾಡಬಹುದೆಂದು ಆದೇಶ ನೀಡಿದೆ. ಆದರೆ, ಅಧ್ಯಕ್ಷ ಹಾಗೂ ಪಿಡಿಒ ಸೇರಿಕೊಂಡು ದೊಡ್ಡ ಬಿಲ್ಗಳನ್ನು ಪಾವತಿಸಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ದೂರಿದರು.
ಹೊಸ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಅಂಗವಿಕಲರ ಕಲ್ಯಾಣ ಕಾರ್ಯಕ್ರಮದ ಅನುದಾನವೂ ಬಳಸಲಾಗಿದೆ. ಚರಂಡಿ ಹೂಳು ಎತ್ತುವಲ್ಲೂ ಅವ್ಯವಹಾರ ಮಾಡಲಾಗಿದೆ. 14ನೇ ಹಣಕಾಸಿನ ಲೆಕ್ಕಪತ್ರ ಹಾಗೂ ಭಾವಚಿತ್ರ ಕೇಳಿದರೆ ಸದಸ್ಯರಿಗೇ ಕೊಡುವುದಿಲ್ಲ ಎಂದು ಆರೋಪಿಸಿದರು.