ರಾಯಚೂರು: ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ವತಿಯಿಂದ ಧನಸಹಾಯ ಮಾಡಬೇಕು ಎಂದು ಒತ್ತಾಯಿಸಿ ವಿಜಿ ಕಲಾವಿದರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕರ್ನಾಟಕ ರಂಗ ಪರಿಷತ್ಗೆ ಕಳೆದ ಮೂರು ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ನೀಡುತ್ತಿದ್ದು, ಈ ವರ್ಷ ಇದುವರೆಗೆ ಧನಸಹಾಯ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ರಾಜ್ಯದಾದ್ಯಂತ ಸಾವಿರಾರು ಸಂಘ ಸಂಸ್ಥೆಗಳು ಹಾಗೂ ಕಲಾವಿದರು ಧನಸಹಾಯಕ್ಕಾಗಿ ಕಾಯುವಂತಾಗಿದೆ. ಹಿಂದಿನ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಉದ್ದಟತನದಿಂದ ವರ್ತಿಸಿ ಕಲಾವಿದರು ಕಳ್ಳರೆಂದು ನಿಂದಿಸಿ ಧನಸಹಾಯವನ್ನು ನಿಲ್ಲಿಸಲು ಪ್ರಯತ್ನಿಸಿದ್ದರು.
ಈ ಸರ್ಕಾರ ಮೊದಲಿನಂತೆಯೆ ಧನಸಹಾಯಕ್ಕೆ ಅರ್ಜಿಗಳನ್ನು ಕರೆದು, ಧನ ಸಹಾಯವನ್ನು ಬಿಡುಗಡೆ ಮಾಡಿತ್ತು. ಆದರೆ, ಕೋವಿಡ್ ಕಾರಣದಿಂದ ಬಿಡುಗಡೆಯಾದ ಬಹುಭಾಗ ಹಣವನ್ನು ಸಂಘ ಸಂಸ್ಥೆಗಳಿಗೆ ನೀಡದೇ ತಡೆಹಿಡಿದ್ದರಿಂದ ಕಲಾವಿದರಿಗೆ ಸಮಸ್ಯೆಯಾಗಿದೆ ಎಂದು ದೂರಿದರು.
ಸರ್ಕಾರ ಇವರೆಗೂ ಸಂಘ ಸಂಸ್ಥೆಗಳಿಂದ ಮತ್ತು ಕಲಾವಿದರಿಂದ ಧನಸಹಾಯಕ್ಕಾಗಿ ಅರ್ಜಿಗಳನ್ನು ಕರೆದಿಲ್ಲ. ಕಲೆಯನ್ನೆ ನಂಬಿಕೊಂಡು ಬದುಕುತ್ತಿರುವ ಲಕ್ಷಾಂತರ ಕಲಾವಿದರ ಬದುಕು ಅತಂತ್ರ ಪರಿಸ್ಥಿತಿಯಲ್ಲಿದ್ದು ಕೂಡಲೇ ಕಲಾವಿದರಿಗೆ ಧನಸಹಾಯ ಹಾಗೂ ಪ್ರಾಯೋಜನೆಗಳನ್ನು ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಸಂಘದ ಅಧ್ಯಕ್ಷ ಜೋಸೆಫ್, ವೆಂಕಟೇಶ ಆಲ್ಕೋಡ್, ರಂಗಸ್ವಾಮಿ, ಲಕ್ಷ್ಮಣ ಮಂಡಲಗೇರ, ಸುಧಾಕರ, ವಿಜಯಕುಮಾರ, ವೆಂಕಟ ನರಸಿಂಹಲು, ನರಸಿಂಹಲು ಅರೋಲಿ, ತಿರುಪತಿ, ಅಯ್ಯಪ್ಪಸ್ವಾಮಿ, ಅನಿಲಕುಮಾರ ಇದ್ದರು.