ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಹುಡುಕಿ ಬಂದರೂ ಅನುಭವಿಸಲಾಗದ ಅಶೋಕ ಗಸ್ತಿ

ಹಿಂದುಳಿದ ಭಾಗದ ಸಮಸ್ಯೆ ದೆಹಲಿಯಲ್ಲಿ ಪ್ರಸ್ತಾಪಿಸುವ ಮಹದಾಸೆ ಈಡೇರಲಿಲ್ಲ
Last Updated 18 ಸೆಪ್ಟೆಂಬರ್ 2020, 9:57 IST
ಅಕ್ಷರ ಗಾತ್ರ

ರಾಯಚೂರು: ರಾಜಕೀಯದಲ್ಲಿ ಇದ್ದರೂ ಉನ್ನತ ಸ್ಥಾನಕ್ಕೆ ಸುಲಭವಾಗಿ ಹೋಗುತ್ತೇನೆ ಎನ್ನುವುದನ್ನು ಸ್ವತಃ ನಿರೀಕ್ಷೆ ಇಟ್ಟುಕೊಂಡಿರದ ಅಶೋಕ ಗಸ್ತಿ ಅವರನ್ನು ರಾಜ್ಯಸಭೆ ಸ್ಥಾನ ಹುಡುಕಿಕೊಂಡು ಬಂದಿತ್ತು. ಆದರೆ, ವಿಧಿಯಾಟಕ್ಕೆ ಶರಣಾದ ಅವರು ಅಧಿಕಾರ ಅನುಭವಿಸಲಾಗಲಿಲ್ಲ.

ಗುರುವಾರ ರಾತ್ರಿ 10.30 ಕ್ಕೆ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ಜೂನ್‌ 12 ರಂದು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿರುವುದನ್ನು ಬಿಜೆಪಿ ವರಿಷ್ಠರು ಘೋಷಿಸಿದ್ದರು. ಪಕ್ಷದೊಳಗೆ ಹಾಗೂ ಹೊರಗಡೆಯಲ್ಲೆಲ್ಲ ಅಶೋಕ ಗಸ್ತಿ ಅವರ ಆಯ್ಕೆಯು ಅಚ್ಚರಿಯನ್ನುಂಟು ಮಾಡಿತ್ತು. ಪ್ರಾಮಾಣಿಕ ದುಡಿಮೆ ಹಾಗೂ ಅಪೇಕ್ಷೆಯಿಲ್ಲದೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವವರನ್ನು ಬಿಜೆಪಿ ನಾಯಕರು ಗುರುತಿಸಿ ಸ್ಥಾನಮಾನ ಕೊಟ್ಟಿದ್ದಕ್ಕೆ ಅಚ್ಚರಿಯೊಂದಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು.

ರಾಜ್ಯಸಭೆಗೆ ಆಯ್ಕೆ ಮಾಡಿರುವ ಸುದ್ದಿ ಹೊರಬಿದ್ದಾಗ, ಅಶೋಕ ಗಸ್ತಿ ಅವರು ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸುತ್ತಿದ್ದರು. ‘ಅಧಿಕಾರ ನೀಡುವಂತೆ ಯಾರಿಗೂ ಕೇಳಿರಲಿಲ್ಲ. ಆದರೆ, ಪಕ್ಷದ ವರಿಷ್ಠರು ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಗುರುತಿಸಿ ರಾಜ್ಯಸಭೆಗೆ ಹೋಗುವ ಅವಕಾಶ ಮಾಡಿದ್ದಾರೆ. ನಾಡಿನ ಸಮಸ್ಯೆಗಳನ್ನು ಸಂಸತ್‌ನಲ್ಲಿ ಬಿಂಬಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ’ ಎಂದು ಗಸ್ತಿ ಅವರು ಪ್ರತಿಕ್ರಿಯೆ ನೀಡಿದ್ದರು. ಜುಲೈನಲ್ಲಿ ಸಂಸತ್‌ ಸದಸ್ಯರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು.

ಅಧಿಕಾರ ಬಂದರೂ ಸರಳತೆಯನ್ನು ಬಿಟ್ಟುಕೊಡದೆ, ಸ್ನೇಹಿತರು, ಹಿತೈಷಿಗಳು ಹಾಗೂ ಆಹ್ವಾನಿಸಿದವರ ಮನೆಗಳಿಗೆ ಸ್ವತಃ ಭೇಟಿ ನೀಡುತ್ತಾ ಬಂದಿದ್ದರು. ರಾಯಚೂರು ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕೆಲಸಗಳನ್ನು ಪೂರ್ಣ ಮಾಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಮ್ಮದೇ ಆದ ವ್ಯಾಪ್ತಿಯಲ್ಲಿ ಒತ್ತಾಯ ಮಾಡುತ್ತಾ ಬಂದಿದ್ದರು. ಜನಪರ ನಿಲುವು ಇಟ್ಟುಕೊಂಡಿದ್ದ ಅಶೋಕ ಗಸ್ತಿ ಅವರು ಇಷ್ಟು ಬೇಗ ವಿಧಿವಶ ಆಗಿರುವುದಕ್ಕೆ ಜನರಲ್ಲಿ ದುಃಖ ಮಡುಗಟ್ಟಿದೆ. ಮುಖ್ಯವಾಗಿ ಅವರ ಕುಟುಂಬದಲ್ಲಿ ನಡೆದ ಸರಣಿ ಸಾವುಗಳು ಆಘಾತವನ್ನುಂಟು ಮಾಡಿವೆ.

ಅಶೋಕ ಗಸ್ತಿ ಅವರು ರಾಜ್ಯಸಭೆಗೆ ಆಯ್ಕೆಯಾದ ಒಂದು ತಿಂಗಳಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರು. ಈ ದುಃಖದಲ್ಲಿ ಮುಳುಗಿರುವಾಗಲೇ ಆನಂತರದ 15 ದಿನಗಳಲ್ಲಿ ಅತ್ತೆ (ಪತ್ನಿಯ ತಾಯಿ) ಕೂಡಾ ಮೃತಪಟ್ಟರು. ಎರಡು ಸಾವುಗಳಿಂದ ಇನ್ನೂ ಕುಟುಂಬ ಸಾವರಿಸಿಕೊಂಡಿರಲಿಲ್ಲ. ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅಶೋಕ ಗಸ್ತಿ ಅವರು ಜನಮಾನಸದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದರು. ತಮ್ಮನ್ನು ಭೇಟಿ ಆಗುವುದಕ್ಕೆ ಬರುತ್ತಿದ್ದ ಜನರಿಂದ ಎಂದೂ ದೂರ ಹೋಗುತ್ತಿರಲಿಲ್ಲ. ಅಭಿನಂದನೆಗಳನ್ನು ಸ್ವೀಕರಿಸುವ ಜೊತೆಗೆ ಕುಂದುಕೊರತೆ ಹಾಗೂ ಬೇಡಿಕೆಗಳಿಗೆ ಕಿವಿಗೊಡುತ್ತಾ ಬಂದಿದ್ದರು. ಸಾಧ್ಯವಾದಷ್ಟು ಸ್ಪಂದಿಸಿ ಕೆಲಸ ಮಾಡುವುದಾಗಿ ಭರವಸೆ ನೀಡುತ್ತಿದ್ದರು. ಸ್ಪಂದಿಸುವ ಸಹೃದಯತೆಯನ್ನು ಇಷ್ಟಪಟ್ಟಿದ್ದ ಸಾರ್ವಜನಿಕರು ಅವರಲ್ಲಿಗೆ ಹೋಗಿ ಕಷ್ಟಗಳನ್ನು ಹಂಚಿಕೊಳ್ಳುತ್ತಿದ್ದರು.

ಅಧಿವೇಶನದಲ್ಲಿ ಭಾಗಿಯಾಗಲಿಲ್ಲ: ಜೂನ್‌ 12 ರಂದು ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶೋಕ ಗಸ್ತಿ ಅವರು ಒಂದೇ ಒಂದು ಅಧಿವೇಶನದಲ್ಲಿ ಭಾಗಿಯಾಗುವ ಅವಕಾಶ ಆಗಲಿಲ್ಲ. ದೇಶದಲ್ಲಿ ಕೋವಿಡ್‌ ಮಹಾಮಾರಿ ಕಾಲಾವಧಿಯಲ್ಲೇ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ, ಅದರ ಸೋಂಕಿನಿಂದ ಅನಾರೋಗ್ಯಕ್ಕೀಡಾಗಿ ನಿಧನರಾಗಿದ್ದು ವಿಧಿಯಾಟ.

ಜುಲೈ 22 ರಂದು ರಾಜ್ಯಸಭೆಯಲ್ಲಿ ನಡೆದ ಅಲ್ಪಾವಧಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಿದ್ದರು. ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುವ ಮಹದಾಸೆ ಇಟ್ಟುಕೊಂಡಿದ್ದ ಅಶೋಕ ಗಸ್ತಿ ಅವರ ಆಸೆ ಈಡೇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT