ರಾಯಚೂರು: ಕೋವಿಡ್ನಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯದಲ್ಲಿ ಸ್ಪಂದನೆ ನೀಡದ ಪಕ್ಷ ಆಡಳಿತ ನಡೆಸುತ್ತಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಪಕ್ಷದ ಹಿರಿಯ ಮುಖಂಡ ಸಿದ್ದನಗೌಡ ದರೂರ ಕರೆ ನೀಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ರಾಜ್ಯ ಅದ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡಿದನಿಮಿತ್ತ ಪಕ್ಷದ ಮುಖಂಡ ಯಂಕಣ್ಣ ಯಾದವ ಅವರು ನಗರದ ಹೋಟೆಲ್ ಬೃಂದಾವನ ಬಯಲು ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು ಜನರನ್ನು ಮಂದಮತಿ ಮಾಡಿದೆ. ಬರೀ ಡಂಬಾಚಾರದಿಂದ ಮಾತನಾಡುವ ಕಲೆ ಅವರಿಗೆ ಗೊತ್ತಿದೆ. ಜನರ ಸೇವೆಗಾಗಿ ಹುಟ್ಟುಕೊಂಡಿರುವ ಕಾಂಗ್ರೆಸ್ಗೆ ತನ್ನದೇ ಆದ ಇತಿಹಾಸವಿದೆ. ಸದ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತಿದ್ದು, ಪ್ರತಿಯೊಬ್ಬರೂ ಪಕ್ಷದ ವಿಚಾರವನ್ನು ನಂಬಿಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾಂಗ್ರೆಸ್ನಲ್ಲಿಯೆ ಬೆಳೆದಿದ್ದ ಕೆಲವು ನಾಯಕರು ಪಕ್ಷಕ್ಕೆ ದ್ರೋಹ ಮಾಡಿದ್ದರಿಂದ ಅಧಿಕಾರ ಕಳೆದುಕೊಳ್ಳುವ ಪ್ರಸಂಗ ಎದುರಾಗಿದೆ. ಇಂಥವರಿಂದಾಗಿಯೇ ಪಕ್ಷವು ಸ್ವಲ್ಪ ಹಿಂದುಳಿದಿದೆ. ಮತ್ತೆ ಮೈ ಕೊಡವಿಕೊಂಡು ಮೇಲೆಳಬೇಕು. ಪಕ್ಷದಲ್ಲಿ ನಿಷ್ಠೆಯಿಂದ ದುಡಿಯುವವರಿಗೆ ಚುನಾವಣೆ ಟಿಕೆಟ್ ನೀಡಬೇಕು ಎಂದರು.
ದೇಶದಲ್ಲಿ ಒಂದು ಕಡೆ ಕೊರೊನಾ ಹಾವಳಿ ಇದೆ. ಇನ್ನೊಂದು ಕಡೆ, ಚೀನಾ ದೇಶವು ಯುದ್ಧಕ್ಕೆ ನಿಂತಿದೆ. ಇದರಿಂದ ಭೀತಿ ಸೃಷ್ಟಿಯಾಗಿದ್ದರೂ, ಕೇಂದ್ರ ಸರ್ಕಾರವು ಅಕ್ಕಿ, ಗೋಧಿ ನೀಡುವುದಾಗಿ ಹೇಳುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡ ಯಂಕಣ್ಣ ಯಾದವ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾಗುತ್ತಿರುವ ಡಿ.ಕೆ. ಶಿವಕುಮಾರ್ ಸಮರ್ಥ ನಾಯಕರು. ಅವರ ಮಾರ್ಗದರ್ಶನದಲ್ಲಿ ಪಕ್ಷವು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.