ಮುದಗಲ್: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಸಭೆ ನಡೆಯಿತು.
ಆರೋಗ್ಯ, ಪೌರಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
ಪಟ್ಟಣದಲ್ಲಿ ಇದುವರೆಗೂ 32 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಬೇಕಿದೆ. ಲಸಿಕೆಗಾಗಿ ಫಲಾನುಭವಿಗಳ ಮನವೊಲಿಸಿ ಆಸ್ಪತ್ರೆಗೆ ಕರೆತರಬೇಕು ಎಂದು ಹೇಳಲಾಯಿತು.
ಕೋವಿಡ್ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ. ಎಲ್ಲರೂ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ಓಡಾಡಬಾರದು ಎಂದು ತಿಳಿ ಹೇಳಬೇಕು. ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಕೊರೊನಾ ತಡೆಯಲು ಸಾರ್ವಜನಿಕರ ಸಹಕಾರ ಪಡೆಯಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ, ಪೊಲೀಸ್ ಇಲಾಖೆಯ ಚನ್ನಪ್ಪ, ಪ್ರಯೋಗ ಶಾಲಾ ತಂತ್ರಜ್ಞ ಮಕ್ತುಂಸಾಬ್, ಕಿರಿಯ ಆರೋಗ್ಯ ಸಹಾಯಕ ಮಹೇಶ ಹೊಸಮನಿ, ಪುರಸಭೆ ಸಿಬ್ಬಂದಿ ಹನುಮಂತ ನಾಯಕ, ಜಗನ್ನಾಥ ಜೋಶಿ, ಜಿಲಾನಿ ಪಾಷ ಹಾಗೂ ಆಸ್ಪತ್ರೆ ಸಿಬ್ಬಂದಿ ಅರುಣಕುಮಾರ ಇದ್ದರು.