ಶಕ್ತಿನಗರ (ರಾಯಚೂರು ಜಿಲ್ಲೆ): ಇಲ್ಲಿಯ ಮುಖ್ಯರಸ್ತೆ ಪಕ್ಕದಲ್ಲಿ ಮಲಗಿದ್ದ ಆನಾರೋಗ್ಯ ಪೀಡಿತ ಅನಾಥ ವೃದ್ಧೆಗೆ ಚಿಕಿತ್ಸೆ ಕೊಡಿಸಲು ಶಕ್ತಿನಗರ ಠಾಣೆಯ ಪೊಲೀಸರು ಆಂಬುಲೆನ್ಸ್ ವ್ಯವಸ್ಥೆ ಮಾಡಿ ರಾಯಚೂರಿನರಿಮ್ಸ್ ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ಚಿಕಿತ್ಸೆ ನೀಡದೇ ವಾಪಸ್ ಕಳಿಸಲಾಗಿದೆ.
ರಿಮ್ಸ್ ಆಸ್ಪತ್ರೆಯವರು ಚಿಕಿತ್ಸೆಗೆ ದಾಖಲಿಸಿಕೊಳ್ಳದ ಕಾರಣ, ವೃದ್ಧೆಯನ್ನು ವಾಪಸ್ ಕರೆತಂದ ಪೊಲೀಸರು ಇಲ್ಲಿಯ ಮುಖ್ಯರಸ್ತೆ ಪಕ್ಕದಲ್ಲಿಯೇ ಮಲಗಿಸಿದ್ದಾರೆ.ಗುರುವಾರ ಅನಾಥಾಶ್ರಮಕ್ಕೆ ಸೇರಿಸಲು ವ್ಯವಸ್ಥೆ ಮಾಡುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.
‘ವೃದ್ಧೆಗೆ ಸಂಬಂಧಿಕರು ಯಾರೂ ಇಲ್ಲ. ಬುಧವಾರ ಅವರನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಕೋವಿಡ್ ಪರೀಕ್ಷೆ ಮಾಡಿದ ಮೇಲಾದರೂ ಚಿಕಿತ್ಸೆ ನೀಡಿ ಎಂದು ನಮ್ಮ ಸಿಬ್ಬಂದಿ ಮನವಿ ಮಾಡಿಕೊಂಡರೂಆಸ್ಪತ್ರೆಯಲ್ಲಿ ಸ್ಪಂದನೆ ಸಿಗಲಿಲ್ಲ’ ಎಂದು ಸಬ್ ಇನ್ಸ್ಪೆಕ್ಟರ್ಎಚ್.ಹುಲಿಗೇಶ್ ಅಸಹಾಯಕತೆ ವ್ಯಕ್ತಪಡಿಸಿದರು.
‘ಅನಾಥರ ಪರವಾಗಿ ಯಾರಾದರೂ ಜವಾಬ್ದಾರಿ ವಹಿಸಿಕೊಂಡರೆ ಮಾತ್ರ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಆಸ್ಪತ್ರೆಯ ಸಿಬ್ಬಂದಿ ಕೂಡಾ ಜವಾಬ್ದಾರಿ ವಹಿಸಿಕೊಳ್ಳಬಹುದು. ಚಿಕಿತ್ಸೆ ನಿರಾಕರಿಸಿದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ’ ಎಂದು ರಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಬಸವರಾಜ ಪೀರಾಪುರ ಪ್ರತಿಕ್ರಿಯಿಸಿದರು.