ರಾಯಚೂರು: ಜಿಲ್ಲೆಯಲ್ಲಿ ಕೋವಿಡ್–19 ವೈರಸ್ ತಡೆಗಟ್ಟಲು ದಶ ದಿಕ್ಕುಗಳಿಂದ ತೀವ್ರ ಕಟ್ಟೆಚ್ಚರ ವಹಿಸಬೇಕು. ಗಡಿಭಾಗದಲ್ಲಿ ಚೆಕ್ಪೋಸ್ಟ್ ನಿರ್ಮಿಸಿ, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜೈ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಕೋವಿಡ್–19 ಸೊಂಕು ಜಗತ್ತಿನ್ಯಾದ್ಯಂತ ಹರಡುತ್ತಿದ್ದು ಪಕ್ಕದ ತೆಲಂಗಾಣಕ್ಕೆ ಕಾಲಿಟ್ಟಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ದಿನನಿತ್ಯ ವ್ಯಾಪಾರ ವಹಿವಾಟಿಗಾಗಿ ಹಲವರು ಹೈದರಾಬಾದ್ಗೆ ಹೋಗಿ ಬರುತ್ತಾರೆ. ಇದರಿಂದ ಜಿಲ್ಲೆಯಲ್ಲಿ ಸೊಂಕು ಹರಡುವ ಸಾಧ್ಯತೆಯಿದ್ದು ಗಡಿಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ, ಆರೋಗ್ಯ ಇಲಾಖೆಯ ವಿಶೇಷ ತಂಡ ರಚಿಸಿ ತೀವ್ರ ನಿಗಾ ವಹಿಸಬೆಕು ಎಂದು ಒತ್ತಾಯಿಸಿದರು.
ಪೊಲೀಸ್ ಇಲಾಖೆಯಿಂದ ಮದ್ಯಪಾನ ಮಾಡಿದ ವಾಹನ ಸವಾರರನ್ನು ಪರೀಕ್ಷಿಸಲು ಬಾಯಿಯಲ್ಲಿ ಇಟ್ಟು ಚೆಕ್ ಮಾಡುವ ಯಂತ್ರವನ್ನು ಮತ್ತೊಬ್ಬರಿಗೆ ಬಳಸುವುದರಿಂದ ಪೊಲೀಸರಿಗೆ ಹಾಗೂ ಜನಸಾಮಾನ್ಯರಿಗೆ ಸೊಂಕು ಹರಡುವ ಸಾಧ್ಯತೆಯಿದೆ. ಕೆಲವು ದಿನಗಳವರೆಗೆ ಇದನ್ನು ನಿಷೇಧಿಸಬೇಕು. ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳಲ್ಲಿ ಆರೋಗ್ಯ ಹಾಗೂ ಸಂಘ ಸಂಸ್ಥೆಗಳಿಂದ ಜಾಗೃತಿ ಮೂಡಿಸಬೇಕು. ಅರೋಗ್ಯ ಇಲಾಖೆ ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಿ ಸೊಂಕು ಪರೀಕ್ಷಾ ಕೇಂದ್ರ ತೆರೆದು ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಶರಣ ಬಸವ, ರಮೇಶ, ಗೋಪಾಲ,ಶರಣಪ್ಪ, ವಾಜೀದ್, ಶೇಖ್ ಅಲಿ, ರಶೀದ್, ರವಿ, ಅನಿಲ್, ವೆಂಕಟೇಶ ಇದ್ದರು.