ಶಕ್ತಿನಗರ: ‘ಪ್ರವಾಹದಿಂದ ಸಂಭವಿಸಿದ ಮನೆ ಹಾಗೂ ಬೆಳೆ ಹಾನಿ ಕುರಿತು ತ್ವರಿತಗತಿಯಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಸೂಚನೆ ನೀಡಿದರು.
ಚಂದ್ರಬಂಡಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ರೈತರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.
ರೈತರು ತಮ್ಮ ಜಮೀನುಗಳ ಸರ್ವೆ ನಂಬರ್ ಮತ್ತು ಹಿಸ್ಸಾ ನಂಬರ್ವಾರು ತಾವು ಬೆಳೆದ ಬೆಳೆಯ ಮಾಹಿತಿಯನ್ನು ಚಿತ್ರ ಸಹಿತ ನಮೂದಿಸಬೇಕು ಎಂದು ತಿಳಿಸಿದರು.
ಚಂದ್ರಬಂಡಾ ಹೋಬಳಿ ವ್ಯಾಪ್ತಿಯ ಗ್ರಾಮ ಲೆಕ್ಕಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಾಲೇಕಾರರ ಜತೆಗೆ ಚರ್ಚಿಸಿ, ಆತ್ಕೂರು ಮತ್ತು ಡೊಂಗ ರಾಂಪುರ ಗ್ರಾಮಗಳ ಸುತ್ತಮುತ್ತ ಕ್ರಮಬದ್ಧವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಎಂದು ಹೇಳಿದರು.
ಉಪ ತಹಶೀಲ್ದಾರ್ ಅನಿಲಕುಮಾರ, ಕಂದಾಯ ನಿರೀಕ್ಷಕ ರಾಮು ಯಾದವ, ಕೃಷಿ ಅಧಿಕಾರಿ ತ್ರಿವೇಣಿ, ಸಹಾಯಕ ಅಧಿಕಾರಿ ಶೋಭಾ, ಮಾಲತಿ, ಗ್ರಾಮ ಲೆಕ್ಕಾಧಿಕಾರಿ ದೇಶಪಾಂಡೆ ಹಾಗೂ ಸಾಬಣ್ಣ ಸೇರಿ ಹಲವರು ಇದ್ದರು.