ರಾಯಚೂರು: ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಮತಿ ನೀಡಲಾಗಿರುವ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಬುಧವಾರ ಭೇಟಿ ನೀಡಿದರು. ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆಯೆ ಎಂಬುದನ್ನು ಪರಿಶೀಲಿಸಿದರು.
ನಗರದಲ್ಲಿರುವ ಶ್ರೀ ಅಮರೇಶ್ವರ ಕೋವಿಡ್ ಆಸ್ಪತ್ರೆ, ನ್ಯೂ ಫಾರ್ಜೂನ್ ಆಸ್ಪತ್ರೆ ಹಾಗೂ ಟಿಪ್ಪು ಸುಲ್ತಾನ್ ರಸ್ತೆ ವ್ಯಾಪ್ತಿಯಲ್ಲಿ ಬರುವ ಶ್ರೀಲಕ್ಷ್ಮೀನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದರು.
ಸೋಂಕಿತರಿಗೆ ಆಸ್ಪತ್ರೆಯಲ್ಲಿ ಒದಗಿಸಿರುವ ಸೌಲಭ್ಯ ಮತ್ತು ಚಿಕಿತ್ಸೆ ವಿಧಾನಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.ಹೊರ ರೋಗಿಗಳ ಕೇಂದ್ರ, 5 ಸ್ಪೆಷಲ್ ವಾರ್ಡ್ಗಳು, 2 ಡ್ರೆಸಿಂಗ್ ವಾರ್ಡ್ಗಳು ಇರುವ ಬಗ್ಗೆ ವೈದ್ಯರಿಂದ ದೃಢಪಡಿಸಿಕೊಂಡರು. ಆಸ್ಪತ್ರೆ ಕೋಣೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗುವ ರೋಗಿಯ ಸಂಪೂರ್ಣ ವಿವರ ಪಡೆಯಬೇಕು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಿದರು. ಶ್ರೀ ಲಕ್ಷ್ಮೀನಾರಾಯಣ ಆಸ್ಪತ್ರೆಗೆ ಭೇಟಿ ನೀಡಿ, ಸ್ಪೆಷಲ್, ಸಾಮಾನ್ಯ ವಾರ್ಡ್ಗಳನ್ನು ಪರಿಶೀಲಿಸಿದರು. ರೋಗಿಗಳಿಗೆ ಬೆಡ್ಗಳ ವ್ಯವಸ್ಥೆ ಇರುವ ಬಗ್ಗೆ ತಿಳಿದುಕೊಂಡರು. ಎಚ್ಎಫ್ಎನ್ಒ ಆಕ್ಸಿಜಿನ್ ಮಷಿನ್ ಶೀಘ್ರ ಖರೀದಿಸುವಂತೆ ಸೂಚಿಸಿದರು.
ಆಕ್ಸಿಜನ್ ಸಿಲಿಂಡರ್ಗಳು ಖಾಲಿಯಾಗಿದ್ದಲ್ಲಿ ಮತ್ತೆ ಅವುಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಬಾಕಿ ಇರುವ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು. ಮುಂದಿನ ಭೇಟಿಯಲ್ಲಿ ಎಲ್ಲವನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಡಾ.ಸುರೇಂದ್ರ ಬಾಬು, ಐಎಂಎ ಅಧ್ಯಕ್ಷ ಡಾ.ಮಹಾಲಿಂಗಪ್ಪ, ರಿಮ್ಸ್ ನಿರ್ದೇಶಕ ಡಾ.ಬಸವರಾಜ, ಡಾ,ಮಂಜುನಾಥ, ಡಾ.ಅಮರಜೀತ್ ಪಾಟೀಲ್, ಡಾ.ಇರ್ಫಾನ್, ಡಾ.ಕೃಷ್ಣಮೂರ್ತಿ ಇದ್ದರು.