ಮಸ್ಕಿ: ಪಟ್ಟಣದ ಕೃಷಿ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಮಯಕ್ಕೆ ಸರಿಯಾಗಿ ವಿತರಣೆ ಮಾಡುತ್ತಿಲ್ಲವೆಂದು ಆರೋಪಿಸಿ, ರೈತರು ರಾಷ್ಟ್ರೀಯ ಹೆದ್ದಾರಿ (150) ಎ ತಡೆದು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಸಂಜೆ ಪಟ್ಟಣದಲ್ಲಿ ನಡೆಯಿತು.
ಲಿಂಗಸುಗೂರು ರಸ್ತೆಯ ಹೊರವಲಯದಲ್ಲಿರುವ ಕೃಷಿ ಕೇಂದ್ರದಲ್ಲಿ ಬೆಳಿಗ್ಗೆಯಿಂದ ರೈತರು ಕಡಲೇ ಬಿತ್ತನೆ ಬೀಜಕ್ಕಾಗಿ ಕಾಯ್ದು ಕುಳಿತ್ತಿದ್ದರು. ಸಂಜೆಯಾದರೂ ಬಿತ್ತನೆ ಬೀಜಗಳನ್ನು ವಿತರಿಸದೆ ಇಲಾಖೆಯ ಸಿಬ್ಬಂದಿ ವಿಳಂಬ ಮಾಡಿದ್ದರಿಂದ ರೊಚ್ಚಿಗೆದ್ದ ರೈತರು ರಾಷ್ಟ್ರೀಯ ಹೆದ್ದಾರಿ 150 (ಎ) ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಟೈರ್ಗಳಿಗೆ ಬೆಂಕಿಹಚ್ಚಿ ಕೃಷಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಹೆದ್ದಾರಿ ಮೇಲೆ ಕೆಲ ಕಾಲ ಸಾರಿಗೆ ಸಂಚಾರ ಅವ್ಯವಸ್ಥೆಯಾಯಿತು.
ಎರಡು ದಿನಗಳಿಂದ ರೈತರಿಗೆ ಶನಿವಾರ ಕಡಲೇ ಬೀಜ ವಿತರಣೆ ಮಾಡುವುದಾಗಿ ಹೇಳಿ ಗ್ರಾಮೀಣ ಭಾಗದ ರೈತರಿಗೆ ಟೊಕನ್ ಕೊಟ್ಟಿದ್ದರು. ಬಿತ್ತನೆ ಬೀಜ ತರುವುದಕ್ಕಾಗಿ ರೈತರು ಹಳ್ಳಿಗಳಿಂದ ಟಾಟ್ ಏಸ್, ಟಾಂಟಾಂ ವಾಹನದಲ್ಲಿ ಬಂದು ಜಮಾಯಿಸಿದ್ದರು. ಬೆಳಿಗ್ಗೆಯಿಂದ ಬಿತ್ತನೆ ಬೀಜಕ್ಕಾಗಿ ಕಾಯ್ದು ಕುಳಿತ ರೈತರಿಗೆ ಕೃಷಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿರುವುದಕ್ಕೆ ಆಕ್ರೋಶಗೊಂಡ 100ಕ್ಕೂ ಅಧಿಕ ರೈತರು ಪ್ರತಿಭಟನೆ ಮಾಡಿ ಬೀಜಗಳನ್ನು ವಿತರಿಸುವಂತೆ ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆಯ ಅಧಿಕಾರಿ ಮಹಾಂತೇಶ ಹವಲ್ದಾರ್ ರೈತರನ್ನು ಸಮಧಾನಪಡಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿ, ನಂತರ ತಾವೇ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸುವ ವ್ಯವಸ್ಥೆ ಮಾಡಿದರು.
ರಸ್ತೆ ತಡೆ ನಡೆಸಿದ್ದರಿಂದ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು.
ಪ್ರತಿಭಟನೆಯಲ್ಲಿ ರೈತರಾದ ಶರಣಪ್ಪ ಹಳ್ಳಿ ಕುಣಿಕೆಲ್ಲೂರು, ಬಸವರಾಜ ಮಿಂಚೇರಿ, ಮಲ್ಲಣ್ಣ ಖಜಾನೆ, ಮಲ್ಲಣ್ಣ ನೀರಲಕೇರಿ, ಸಿದ್ದಪ್ಪ ಹೂವಿನಬಾವಿ, ಮೌನೇಶ ಮುರಾರಿ, ಖಾಸಿಂ ಮುರಾರಿ ಹಾಗೂ ಇತರರು ಭಾಗವಹಿಸಿದ್ದರು.