ದೇವದುರ್ಗ: ತಾಲ್ಲೂಕಿನ ರಾಮದುರ್ಗ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಪೂರೈಸಿದ ಪ್ರಥಮ ಶಾಲೆ ಶಿಥಿಲಗೊಂಡಿದೆ. ಇಂಡೋ - ಇಸ್ಲಾಮಿಕ್ ಶೈಲಿಯ ಶಾಲೆ ಕಟ್ಟಡದ ಬಣ್ಣವೂ ಮಾಸಿದೆ. ಹಳೆಯ ನೆನಪು. ಹೊಸ ಚಿಗುರು ಎಂಬಂತೆ ಮಕ್ಕಳ ಭವಿಷ್ಯ ರೂಪಿಸಿದ ಶಾಲೆ 107 ಏಳು ವರ್ಷ ಪೂರೈಸಿದೆ.
1916ರಲ್ಲಿ ಪ್ರಾರಂಭವಾದ ಶಾಲೆ 2016ಕ್ಕೆ ಶತಮಾನ ಪೂರೈಸಿ 107ನೇ ವರ್ಷಕ್ಕೆ ಬಂದು ನಿಂತಿದೆ. ಶಾಲೆಯ ದ್ವಜ ಕಂಬದ ಮೇಲೆ 1916 ಎಂದು ನಮೂದಿಸಿದೆ ತಿಂಗಳು, ದಿನಾಂಕ ಮತ್ತು ವಾರ ಉರ್ದು ಭಾಷೆಯಲ್ಲಿವೆ.
ಶಾಲೆಗಾಗಿ ದುಡಿದ ಶಿಕ್ಷಕರು, ಶಾಲೆಯಲ್ಲಿ ಕಲಿತು ಉನ್ನತ ಸ್ಥಾನದಲ್ಲಿರುವ ಸಾಧಕರನ್ನು ನೀಡಿದ ಶಾಲೆಗೆ ಇಂದು ರಕ್ಷಣೆಯ ಅವಶ್ಯಕತೆ ಇದೆ.
ಶಾಲೆಯಲ್ಲಿ ಕಲಿತವರು ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಉದ್ಯೋಗದಲ್ಲಿದ್ದಾರೆ. ಉದ್ಯಮಿ, ಎಂಜಿನಿಯರ್, ವೈದ್ಯರು, ಪೋಲಿಸ್, ಶಿಕ್ಷಣ ಇಲಾಖೆ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಇಲಾಖೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಈ ಶಾಲೆಯಲ್ಲಿ ಓದಿದ ಬಹುತೇಕ ವಿದ್ಯಾರ್ಥಿಗಳಿಗೆ ಶತಮಾನದ ಸಂದೇಶ ರವಾನೆಯಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಶಾಲೆಯ ಬಗ್ಗೆ ಅಭಿಮಾನ ತೊರಿದರೆ ಈಗಿನ ಸ್ಥಿತಿಗತಿ ಸುಧಾರಣೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಗ್ರಾಮದ ಕೆಲ ಹಳೆಯ ವಿದ್ಯಾರ್ಥಿಗಳು.
ಹಳೆಯ ವಿದ್ಯಾರ್ಥಿಗಳ ಸ್ಪಂದನೆ ಕಡಿಮೆ ಇದ್ದರೂ ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿ ಅದ್ದೂರಿ ಕಾರ್ಯಕ್ರಮ ನಡೆಸಲು ಉತ್ಸಾಹದಿಂದ ಮುನ್ನುಗ್ಗಿತ್ತಿದ್ದಾರೆ.
ಪ್ರಸ್ತುತ ಉನ್ನತೀಕರಣಗೊಂಡು ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿದೆ. ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ 432 ಚಿದ್ಯಾರ್ಥಿಗಳು ಇದ್ದಾರೆ. ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಹಿನ್ನಡೆಯಾಗದೆ. ಹಿರಿಯ ಮತ್ತು ಪ್ರೌಢಶಾಲೆ ಸೇರಿ ಒಟ್ಟು 24 ಶಿಕ್ಷಕರ ಪೈಕಿ ಕೇವಲ 5 ಜನ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದ 19 ಅತಿಥಿ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ.
1916ರಿಂದ ಈವರೆಗೂಪ್ರಸ್ತುತ 40–50 ಸಾವಿರಕ್ಕೂ ಹೆಚ್ಚು ಜನ ಇಲ್ಲಿ ಕಲಿತಿದ್ದಾರೆ. ಬದಲಾಗುತ್ತಿರುವ ಇತ್ತೀಚಿನ ಜಾಗತಿಕ ಶಿಕ್ಷಣ ವ್ಯವಸ್ಥೆಗೆ ಪೋಷಕರು ಖಾಸಗಿ ಶಾಲೆಗಳ ಬಗ್ಗೆ ವ್ಯಾಮೋಹ ಹೊಂದಿದ ನಂತರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.
ಶಾಲೆಯ ಹಲವು ಕೊಠಡಿಗಳು ಹೈದರಾಬಾದ್ ನಿಜಾಮರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಇಂದಿಗೂ ಉತ್ತಮ ಸ್ಥಿತಿಯಲ್ಲಿ ಇವೆ ಆದರೆ ಬಣ್ಣ ಮಾತ್ರ ಮಾಸಿದೆ. 3 ವರ್ಷದ ಹಿಂದೆ ಶತಮಾನಕಂಡ ಶಾಲೆಗಳಿಗೆ ಸರ್ಕಾರ ನೀಡಿದ್ದ ₹16 ಲಕ್ಷ ಅನುದಾನದಲ್ಲಿ ಶಾಲೆಗೆ ನಾಲ್ಕು ಹೆಚ್ಚುವರಿ ಕಟ್ಟಡ ಕಟ್ಟಲು ಮಾತ್ರ ಸಾಧ್ಯವಾಗಿದೆ. ಚೈಲ್ಡ್ ಫಂಡ್ ಸಂಸ್ಥೆಯವರು ಶಾಲೆಗೆ ನೀಡಿದ್ದ ಲ್ಯಾಬ್ ಕಟ್ಟಡ ಕೊರತೆಯಿಂದ ಬೇರೆ ಕಡೆಗೆ ವರ್ಗಾವಣೆಯಾಗುತ್ತಿತ್ತು. ಸಕಾಲಕ್ಕೆ ಸರ್ಕಾರ ನೀಡಿದ್ದ ₹16 ಲಕ್ಷದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣವಾದ ಹಿನ್ನೆಲೆ ಚೈಲ್ಡ್ ಫಂಡ್ ಸಂಸ್ಥೆ ನೀಡಿದ ₹ 8 ಲಕ್ಷ ವೆಚ್ಚದ ಸುಸಜ್ಜಿತ ಲ್ಯಾಪ್ ನಿರ್ಮಾಣವಾಗಿ ಮಕ್ಕಳಿಗೆ ಅನುಕೂಲವಾಗಿದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಶಿವಶರಣಪ್ಪ.
ಸರ್ಕಾರವು ಶತಮಾನೋತ್ಸವ ಪೂರೈಸಿದ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಿಗೆ ವಿಶೇಷ ಅನುದಾನ ಘೋಷಿಸಿ ಹಳೆಯ ಕಟ್ಟಡ ರಕ್ಷಣೆಗೆ ಮುಂದಾಗಬೇಕು. ಅಭಿವೃದ್ಧಿ ಮತ್ತು ಪ್ರಾಚೀನ ಕಾಲದ ಕಟ್ಟಡಗಳ ರಕ್ಷಣೆಗೆ ಮುಂದಾಗಬೇಕು ಎಂಬುವುದು ಹಳೆಯ ವಿದ್ಯಾರ್ಥಿಗಳ ಒತ್ತಾಯವು ಆಗಿದೆ.
ಶತಮಾನ ಪೂರೈಸಿದ ಶಾಲೆಗಳಿಗೆ ಸರ್ಕಾರ ₹1 ಕೋಟಿ ಅನುದಾನ ನೀಡಿ ಅಭಿವೃದ್ಧಿ ಪಡಿಸಲು ಮುಂದಾಗಬೇಕು. ಮಕ್ಕಳಿಗೆ ಅನುಗುಣವಾಗಿ ಮೂಲಸೌಕರ್ಯಗಳು ಒದಗಿಸಬೇಕು
-ಗಂಗಾಧರ ವಕೀಲ ಹಳೆಯ ವಿದ್ಯಾರ್ಥಿ
ಶಾಲಾ ಕಟ್ಟಡವು ಇಂಡೋ–ಇಸ್ಲಾಮಿಕ್ ಶೈಲಿಯಲ್ಲಿದ್ದು ಇಂದಿಗೂ ಉತ್ತಮ ಗುಣಮಟ್ಟ ಹೊಂದಿವೆ. ಸ್ವಾತಂತ್ರ್ಯ ಪೂರ್ವ ಶಾಲೆಗಳ ರಕ್ಷಣೆಯಿಂದ ಹಲವು ಇತಿಹಾಸಗಳ ರಕ್ಷಣೆ ಮಾಡಿದಂತಾಗುತ್ತದೆ.
-ಶಿವಶರಣ ಪ್ರಭಾರ ಮುಖ್ಯಶಿಕ್ಷಕ
ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾದ ಶಾಲೆಗಳು ಇಂದು ನಮ್ಮ ಕಣ್ಮುಂದೆ ಹಾಳಾಗಿ ನಿಂತಿವೆ. ಅವುಗಳ ರಕ್ಷಣೆ ಮಾಡದೇ ಇದ್ದಲ್ಲಿ ಇತಿಹಾಸವೇ ಮರೆತಂತೆ ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು
-ರಾಮಣ್ಣ ಎನ್ ಗಣೆಕಲ್ ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟ ತಾಲ್ಲೂಕು ಘಟಕ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.