ರಾಯಚೂರು: ‘ಓದುವ ಹವ್ಯಾಸ ಹಾಗೂ ಕಲಿಕಾ ಆಸಕ್ತಿ ಹೆಚ್ಷಿಸುವ ದಿಸೆಯಲ್ಲಿ ಶಾಲೆಗೆ ಮೌಲ್ಯಯುತವಾದ ಪುಸ್ತಕಗಳನ್ನು ಕೊಡಲಾಗಿದೆ. ವಿದ್ಯಾರ್ಥಿಗಳು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ಇಂಡಿ ವಿಲೇಜ್ ಫೌಂಡೇಶನ್ ವ್ಯವಸ್ಥಾಪಕ ತುಬಾ ಆಫ್ರೀನ್ ಹೇಳಿದರು.
ಇಂಡಿ ವಿಲೇಜ್ ಫೌಂಡೇಶನ್ ವತಿಯಿಂದ ನಗರದ ಸ್ಟೇಷನ್ ಬಜಾರ್ನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪುಸ್ತಕಗಳ ಕಿಟ್ ದೇಣಿಗೆ ನೀಡಿ ಅವರು ಮಾತನಾಡಿದರು.
‘ಏಳನೇ ತರಗತಿಗೆ ಅಗತ್ಯವಿರುವ ಇಂಗ್ಲಿಷ್ ಮೂಲಾಕ್ಷರಗಳ ಪುಸ್ತಕ, ಹಿಂದಿ ಪುಸ್ತಕ, ಕನ್ನಡ ವಿಷಯದ ಹಾಡು, ಹಾಸ್ಯ, ರಸಪ್ರಶ್ನೆ, ಕಥೆ ಪುಸ್ತಕಗಳನ್ನು ಒಳಗೊಂಡ 100 ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ಕೊಡಲಾಗಿದೆ’ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ಮಾತನಾಡಿ, ‘ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಜ್ಞಾನಭಂಡಾರ ನೀಡಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ಶಿಕ್ಷಕರಿಗೂ ಉಪಯುಕ್ತವಾಗಿದೆ’ ಎಂದರು.
ಗ್ರಂಥಾಲಯದ ಹೊಣೆ ವಹಿಸಿಕೊಂಡಿರುವ ಶಿಕ್ಷಕಿ ವೈಶಾಲಿ ಪಾಟೀಲ, ಪದ್ಮಾವತಿ, ಜ್ಯೋತಿ, ಮನೋಹರಮ್ಮ, ಮುದ್ದನಗೌಡ, ಮುತ್ತಣ್ಣ ದೈಹಿಕ ಶಿಕ್ಷಣ ಶಿಕ್ಷಕಿ ಸೂರ್ಯಮ್ಮ, ಸೂಗರಯ್ಯ, ಶಕುಂತಲಾ ಉಪಸ್ಥಿತರಿದ್ದರು.