ಮಸ್ಕಿ (ರಾಯಚೂರು): ಚಾಮರಾಜನಗರ–ಬೀದರ್ (ಸಂಖ್ಯೆ 150ಎ) ರಾಷ್ಟ್ರೀಯ ಹೆದ್ದಾರಿಗೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸಂತೆಕಲ್ಲೂರಿನ ಸಿಂಗಸಿ ಹಳ್ಳದಲ್ಲಿ ನಿರ್ಮಿಸಿದ್ದ ಬೈಪಾಸ್ ರಸ್ತೆಯು ಮಳೆನೀರಿನ ರಭಸಕ್ಕೆ ಮಂಗಳವಾರ ರಾತ್ರಿ ಕೊಚ್ಚಿ ಹೋಗಿದೆ.
ಇದರಿಂದಾಗಿ ಕಲಬುರ್ಗಿ, ಬೀದರ್, ಯಾದಗಿರಿಯಿಂದ ಮಸ್ಕಿ ಮಾರ್ಗದ ಮೂಲಕ ಬೆಂಗಳೂರು ಮತ್ತು ಬಳ್ಳಾರಿಗೆ ತೆರಳುವ ವಾಹನಗಳ ಸಂಪರ್ಕ ಕಡಿತವಾಗಿದೆ. ಇದೀಗ 50 ಕಿಲೋ ಮೀಟರ್ ದೂರ ಸುತ್ತಿಕೊಂಡು ಲಿಂಗಸುಗೂರಿನ ಮೂಲಕ ವಾಹನಗಳ ಸಂಚರಿಸುತ್ತಿವೆ.
ಹಳ್ಳದಲ್ಲಿ ನಿರ್ಮಿಸಿದ್ದ ಸೇತುವೆಯು ಶಿಥಿಲವಾಗಿದ್ದರಿಂದ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಾತ್ಕಾಲಿಕ ಬೈಪಾಸ್ ನಿರ್ಮಾಣ ಮಾಡಿದ್ದರು. ರಸ್ತೆ ಕೊಚ್ಚಿ ಹೋಗಿದ್ದರಿಂದ ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸಿದರು.