ರಾಯಚೂರು: ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ನಿರ್ಧಾರದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ವಿಮೋಚನಾ ಹೋರಾಟವು ಭವ್ಯ ಇತಿಹಾಸವಾಗಿ ಉಳಿದಿದೆ. ಈ ಭಾಗ ಹಿಂದುಳಿದಿದ್ದು, ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವುದು ಸರ್ಕಾರದ ಗುರಿಯಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲಾ ಪೊಲೀಸ್ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಿಜಾಮಶಾಹಿ ಆಡಳಿತದಿಂದ ಮುಕ್ತಿ ಪಡೆದು ಸ್ವತಂತ್ರರಾಗಲು ಈ ಭಾಗದ ಜನರು ಹದಿನಾಲ್ಕು ತಿಂಗಳು ಕಾಯಬೇಕಾಯಿತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸಿ ಗೌರವಿಸಬೇಕಾದ ವಿಶೇಷ ದಿನ ಇದಾಗಿದೆ ಎಂದರು.
ಸರ್ಕಾರವು ಈ ಭಾಗದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಇದಕ್ಕಾಗಿ ಮೀಸಲಿದೆ ಎಂದು ತಿಳಿಸಿದರು.