ರಾಯಚೂರು: ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ತ ಮುನ್ನೂರು ಕಾಪು ಸಮಾಜದ ಯುವಕ ಮಂಡಳಿಯಿಂದ ಗದ್ವಾಲ ರಸ್ತೆಯಲ್ಲಿನ ಲಕ್ಷ್ಮಮ್ಮ ದೇವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 17 ಜೋಡಿಗಳ ವಿವಾಹ ನೆರವೇರಿತು.
19ನೇ ವರ್ಷದ ಮುಂಗಾರು ಹಬ್ಬವನ್ನು ಜೂನ್ 16, 17 ಹಾಗೂ 18ರಂದು ಆಚರಣೆ ಮಾಡಲಾಗುತ್ತಿದ್ದು, ತನಿಮಿತ್ತ ಇದೇ ಮೊದಲ ಬಾರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ವಿವಾಹ ಬಂಧನಕ್ಕೆ ಒಳಗಾದ ನವ ಜೋಡಿಗಳಿಗೆ ಮಾಂಗಲ್ಯ, ಮುತ್ತು, ಕಾಲುಂಗುರ ಹಾಗೂ ಒಂದು ಜೊತೆ ಬಟ್ಟೆ ವಿತರಣೆ ಮಾಡಲಾಯಿತು.
ಗಬ್ಬೂರಿನ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು. ಶಾಸಕ ಡಾ.ಶಿವರಾಜ ಪಾಟೀಲ, ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಹಾಗೂ ಇತರರು ನೂತನ ವಧು ವರರನ್ನು ಆಶೀರ್ವದಿಸಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಸಂಖ್ಯೆಯ ಜನರಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಪೊಲೀಸ್ ಬಂದೋಬಸ್ತ್ ಕೂಡ ಒದಗಿಸಲಾಗಿತ್ತು. 17 ಜೋಡಿಗಳ ಸಂಬಂಧಿಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಕಲ್ಯಾಣ ಮಂಟಪದ ಆವರಣದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಬಿ.ತಿಮ್ಮಾರೆಡ್ಡಿ, ಚಂದ್ರಶೇಖರ ರೆಡ್ಡಿ, ಶ್ರೀನಿವಾಸರೆಡ್ಡಿ, ದೊಡ್ಡ ಮಲ್ಲೇಶ, ಮಹೇಂದ್ರರೆಡ್ಡಿ, ಜಿ.ವೆಂಕಟರೆಡ್ಡಿ, ರವೀಂದ್ರ ಜಲ್ದಾರ ಇದ್ದರು.