ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಮನೆಯೇ ಅಧ್ಯಯನ ಕೇಂದ್ರ

ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ಉಚಿತ ವಸತಿ, ತರಬೇತಿ ವ್ಯವಸ್ಥೆ
Last Updated 5 ನವೆಂಬರ್ 2020, 3:48 IST
ಅಕ್ಷರ ಗಾತ್ರ

ಮಾನ್ವಿ: ಪಟ್ಟಣದ ರಾಜೀವ್ ಗಾಂಧಿ ಕಾಲೊನಿಯಲ್ಲಿ ಇರುವ ಚೀಕಲಪರ್ವಿ ಮಲ್ಲಯ್ಯ ಸ್ವಾಮಿ ಅವರ ಮನೆ ಪದವೀಧರರಿಗೆ ಪ್ರಮುಖ ಅಧ್ಯಯನ ಕೇಂದ್ರವಾಗಿದೆ. ಇದನ್ನು ಮಾನ್ವಿಯ ರೀಡಿಂಗ್ ರೂಮ್ ಎಂದು ಕರೆಯಲಾಗುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಗ್ರಾಮೀಣ ಅಭ್ಯರ್ಥಿಗಳಿಗೆ ಇಲ್ಲಿ ಉಚಿತ ವಸತಿ ವ್ಯವಸ್ಥೆ ಕಲ್ಪಿಸಿರುವುದು ವಿಶೇಷ. ಪ್ರತಿ ವರ್ಷ 8-10 ಯುವಕರು 2 ಕೊಠಡಿಗಳ ಈ ಪುಟ್ಟ ಆಶ್ರಯ ಮನೆಯಲ್ಲಿ ಉಳಿದುಕೊಂಡು ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ, ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದಾರೆ.

ಈ ಮನೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ 200ಕ್ಕೂ ಅಧಿಕ ಪುಸ್ತಕಗಳು ಇವೆ. ಕೊಠಡಿಗಳ ಗೋಡೆಗಳಿಗೆ ನಕಾಶೆಗಳು, ರಾಷ್ಟ್ರ ನಾಯಕರ ವಿವರ, ಮಹತ್ವದ ಸುದ್ದಿಗಳನ್ನು ಹೊಂದಿದ ‘ಪ್ರಜಾವಾಣಿ‘ ಪತ್ರಿಕೆಯ ಪುಟಗಳನ್ನು ಅಂಟಿಸಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಪ್ರಮುಖ ಸುದ್ದಿ ತುಣುಕುಗಳನ್ನು ನೋಟ್ ಬುಕ್‍ನ ಪುಟಗಳಿಗೆ ಅಂಟಿಸಿ ಸಂಗ್ರಹಿಸಿಡಲಾಗಿದೆ. ಅಲ್ಲದೇ ಪ್ರತಿ ದಿನದ ಪ್ರಜಾವಾಣಿ ಪತ್ರಿಕೆ ಇಲ್ಲಿ ಓದಲು ಲಭ್ಯ.

2010ರಲ್ಲಿ ಈ ಮನೆಯ ಮಾಲೀಕರ ಮಗ ಏಕಾಂತ ಹಿರೇಮಠ, ಚಂದ್ರಶೇಖರ ಹೂಗಾರ ನಂದಿಹಾಳ ಮತ್ತಿತರರು ಈ ‘ರೀಡಿಂಗ್ ರೂಮ್’ ಆರಂಭಿಸಿದ್ದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಹಾಕಿದ ಸಹಪಾಠಿಗಳು ಈ ರೀಡಿಂಗ್ ರೂಮ್‍ನಲ್ಲಿ ಪಠ್ಯ ವಿಷಯವಾರು ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅಧ್ಯಯನ, ಪರಸ್ಪರ ಚರ್ಚೆ ನಡೆಸುತ್ತಿದ್ದರು. 2014ರ ನಂತರ ಏಕಾಂತ ಹಿರೇಮಠ 6 ಸರ್ಕಾರಿ ನೌಕರಿಗಳಿಗೆ ಆಯ್ಕೆಯಾಗಿದ್ದಾರೆ. ಚಂದ್ರಶೇಖರ ಹೂಗಾರ 3 ವರ್ಷಗಳಲ್ಲಿ 10ಸರ್ಕಾರಿ ನೌಕರಿಗಳಿಗೆ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ. ಇತರ ಗೆಳೆಯರೂ ಸಹ ವಿವಿಧ ಇಲಾಖೆಗಳ ನೌಕರಿ ಪಡೆದಿದ್ದಾರೆ. ಈಗಲೂ ಉಚಿತವಾಗಿ ಈ ರೀಡಿಂಗ್ ರೂಮ್ ಸೌಲಭ್ಯ ಮುಂದುವರಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಹಾಕಿರುವವರು ಓದಲು ಈ ರೀಡಿಂಗ್ ರೂಮ್‍ಗೆ ಪ್ರತಿ ದಿನ ಬರುತ್ತಾರೆ. ಇದುವರೆಗೆ ಸುಮಾರು 30ಕ್ಕೂ ಅಧಿಕ ಯುವಕರು ವಿವಿಧ ಸರ್ಕಾರಿ ನೌಕರಿಗಳಿಗೆ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯ ಮೇಲ್ವಿಚಾರಕ ಚಂದ್ರಶೇಖರ ಹೂಗಾರ, ಬಿಸಿಎಂ ಇಲಾಖೆಯ ಎಫ್.ಡಿ.ಎ ಏಕಾಂತ ಹಿರೇಮಠ ಬಿಡುವಿನ ವೇಳೆ ಪರೀಕ್ಷಾರ್ಥಿಗಳಿಗೆ ಉಚಿತ ಮಾರ್ಗದರ್ಶನ ನೀಡುತ್ತಾರೆ. ಈಗ ಕೋವಿಡ್ ಕಾರಣ ಉಚಿತ ತರಗತಿಗಳನ್ನು ರದ್ದುಪಡಿಸಿದ್ದಾರೆ. ಇಬ್ಬರು ಗೆಳೆಯರ ನಿಸ್ವಾರ್ಥ ಸೇವೆ ಮಾದರಿಯಾಗಿದೆ.

ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ರಾಜಕೀಯ, ಆರ್ಥಿಕ, ವಿಜ್ಞಾನ ಕ್ರೀಡಾ ವಿಭಾಗದ ಪ್ರಚಲಿತ ವಿದ್ಯಮಾನಗಳ ಕುರಿತು ವಸ್ತುನಿಷ್ಠ ಸುದ್ದಿಗಳನ್ನು ಪ್ರಕಟಿಸುವ ಪ್ರಜಾವಾಣಿ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ಬಲು ಉಪಯುಕ್ತ ಎಂಬುದು ಸರ್ಕಾರಿ ನೌಕರಿಗೆ ಆಯ್ಕೆಯಾಗಿರುವ ಏಕಾಂತ ಹಿರೇಮಠ ಹಾಗೂ ಚಂದ್ರಶೇಖರ ಹೂಗಾರ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT