ರಾಯಚೂರು: ಮಾವನ ಮನೆಯಲ್ಲಿ ಹೊಸ ವರ್ಷಾಚರಣೆ ಮಾಡುವುದಕ್ಕಾಗಿ ತಾಯಿಯ ಜೊತೆಗೆ ರಾಯಚೂರಿನಿಂದ ಕಡಪಾ ಜಿಲ್ಲೆ ಸಿದ್ದಪಟ್ಟಣಂ ಗ್ರಾಮಕ್ಕೆ ತೆರಳಿದ್ದ ಮೂವರು ಮಕ್ಕಳು ಸೇರಿ ನಾಲ್ಕು ಮಂದಿ ಪೆನ್ನಾ ಕಾಲುವೆಯಲ್ಲಿ ಈಜಲು ಹೋಗಿ ನೀರಾಪಾಲಾಗಿರುವ ಘಟನೆ ಶುಕ್ರವಾರ ನಡೆದಿದೆ.
ರಾಯಚೂರಿನ ಮೆಥೋಡಿಸ್ಟ್ ಚರ್ಚ್ ಬಡಾವಣೆ ನಿವಾಸಿ ಗೌಸ್ಪಾಷಾ ಅವರ ಮೂವರು ಪುತ್ರಿಯರಾದ ಮದಿನಾ (12), ಫರಿನಾ (10), ಲೋಹಾ (8) ಹಾಗೂ ಸ್ಥಳೀಯ ವ್ಯಕ್ತಿ ಅನ್ವರ್ (35) ಮೃತಪಟ್ಟಿದ್ದಾರೆ.
ಬಾಲಕಿಯರು ಕಾಲುವೆಯಲ್ಲಿ ಕೊಚ್ಚಿಹೋಗುವುದನ್ನು ಗಮನಿಸಿ, ರಕ್ಷಿಸಲು ಧಾವಿಸಿದ್ದ ಅನ್ವರ್ ಕೂಡಾ ಮಕ್ಕಳೊಂದಿಗೆ ಹೆಣವಾಗಿದ್ದಾರೆ. ಕಡಪಾದಿಂದ ರಾಯಚೂರು ಮೃತದೇಹಗಳನ್ನು ತೆಗೆದುಕೊಂಡು ಬರಲಾಗುತ್ತಿದೆ ಎಂದು ರಾಯಚೂರು ಪೊಲೀಸರು ತಿಳಿಸಿದ್ದಾರೆ.
ಗೌಸ್ಪಾಷಾ ಅವರ ಪತ್ನಿಯ ಸಹೋದರರೊಬ್ಬರು ಕಡಪಾದಲ್ಲಿ ವಾಸಿಸುತ್ತಿದ್ದರು. ಡಿಸೆಂಬರ್ ಕೊನೆಯ ದಿನದಂದು ತಾಯಿಯೊಂದಿಗೆ ಮೂವರು ಪುತ್ರಿಯರು ತೆರಳಿದ್ದರು.