2009ರಲ್ಲಿ ಭೀಕರ ನೆರೆಹಾವಳಿ ಸಂಭವಿಸಿದ್ದಾಗ ನದಿಪಾತ್ರದ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಖರಾಬದಿನ್ನಿ, ದೇವಿಪುರ, ಯಡಿವಾಳ, ಚೀಕಲಪರ್ವಿ, ಕಾತರಕಿ, ದದ್ದಲ, ಉಮಳಿಪನ್ನೂರು, ಜೂಕೂರು ಗ್ರಾಮಗಳ ಹೊರವಲಯದ ಜಮೀನುಗಳಲ್ಲಿ ಖಾಸಗಿ ಸಂಘ ಸಂಶ್ಥೆಗಳ ಸಹಭಾಗಿತ್ವದಲ್ಲಿ ಸುಸಜ್ಜಿತ ಆಸರೆ ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ದೇವಿಪುರ, ಚೀಕಲಪರ್ವಿ ಹಾಗೂ ಜೂಕೂರು ಗ್ರಾಮಗಳಲ್ಲಿ ದಶಕ ಕಳೆದರೂ ಆಸರೆ ಮನೆಗಳು ಗ್ರಾಮಸ್ಥರಿಗೆ ಹಂಚಿಕೆಯಾಗಿಲ್ಲ. ಈ ಕುರಿತು ಹಲವು ಬಾರಿ ತಾಲ್ಲೂಕು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ನಿರಾಸಕ್ತಿವಹಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.