ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಬೆಂಕಿ ಅವಘಡ ಪ್ರಕರಣಗಳು ಹೆಚ್ಚುತ್ತಿದು ಅಗ್ನಿ ಶಾಮಕ ವಾಹನ ಬರುವುದು ವಿಳಂಬವಾಗುವುದರಿಂದ ಬಹುತೇಕ ಪ್ರರಕಣಗಳಲ್ಲಿ ಹೆಚ್ಚಿನ ನಷ್ಟ ಉಂಟಾಗುತ್ತಿದೆ.
ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಗೆ ಮಾನ್ವಿ, ಸಿರವಾರ ಮತ್ತು ಮಸ್ಕಿ ತಾಲ್ಲೂಕಿನ ಅಂದಾಜು 52 ಹಳ್ಳಿಗಳು ಮತ್ತು19 ಕ್ಯಾಂಪ್ಗಳು ಬರುತ್ತವೆ. ನೂತನ ತಾಲ್ಲೂಕು ರಚನೆಯಾಗಿ 7 ವರ್ಷಗಳು ಕಳೆದರೂ ಮಸ್ಕಿ ಮತ್ತು ಸಿರವಾರ ಪಟ್ಟಣಗಳಲ್ಲಿ ಅಗ್ನಿ ಶಾಮಕ ಠಾಣೆ ತೆರೆದಿಲ್ಲ ಹೀಗಾಗಿ ಈ ಭಾಗದಲ್ಲಿ ಬೆಂಕಿ ಪ್ರಕರಣ ಕಾಣಿಸಿಕೊಂಡರೆ ಲಿಂಗಸುಗೂರು ಪಟ್ಟಣದಿಂದಲೇ ವಾಹನ ಬರಬೇಕಿದೆ. ಲಿಂಗಸುಗೂರು–ಕವಿತಾಳ ಮಧ್ಯೆ 30 ಕಿ.ಮೀ. ಅಂತರವಿದ್ದು ಇಲ್ಲಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಬೇಕಾದರೆ ಮತ್ತೆ 30 ಕಿ.ಮೀ. ಕ್ರಮಿಸಬೇಕು. ಹದಗೆಟ್ಟ ರಸ್ತೆಗಳು, ರಸ್ತೆ ಮಾರ್ಗ ಕುರಿತು ಮಾಹಿತಿ ಕೊರತೆ ಹೀಗೆ ವಿವಿಧ ಕಾರಣಗಳಿಂದ ಅಗ್ನಿ ಶಾಮಕ ವಾಹನ ಘಟನಾ ಸ್ಥಳಕ್ಕೆ ತಲುಪಲು ತಡವಾಗುತ್ತದೆ.
ಕವಿತಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2022ರಲ್ಲಿ 11 ಮತ್ತು 2023-24ನೇ ಸಾಲಿನಲ್ಲಿ 24 ಪ್ರಕರಣಗಳು ಸಂಭವಿಸಿವೆ ಎನ್ನುವುದು ಅಗ್ನಿ ಶಾಮಕ ಠಾಣೆ ನೀಡಿದ ಮಾಹಿತಿ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಪಟ್ಟಣ ಸೇರಿದಂತೆ ಗೂಗೆಬಾಳ, ಹಿರೇದಿನ್ನಿ, ಮಲ್ಲದಗುಡ್ಡ ಮತ್ತಿತರ ಕಡೆ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್ಗಳಲ್ಲಿ ಸಾಗಿಸುತ್ತಿದ್ದ ಭತ್ತದ ಹುಲ್ಲು ಸಂಪೂರ್ಣ ಸುಟ್ಟ ಘಟನೆಗಳು ನಡೆದಿವೆ ಎಂಜಿನ್ನಿಂದ ಟ್ರ್ಯಾಕ್ಟರ್ ಬೇರ್ಪಡಿಸಿ ಬೆಂಕಿ ನಂದಿಸಲು ಸ್ಥಳೀಯರು ಮುಂದಾದ ಹಿನ್ನೆಲೆಯಲ್ಲಿ ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕವಿತಾಳದಲ್ಲಿ ಈಚೆಗೆ ಅಂದಾಜು 16 ಟ್ರ್ಯಾಕ್ಟರ್ನಷ್ಟು ಭತ್ತದ ಹುಲ್ಲಿನ ಬಣವಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟುಹೋಗಿದೆ. ಬಹುತೇಕ ಪ್ರಕರಣಗಳಲ್ಲಿ ಬೆಂಕಿ ಸಂಪೂರ್ಣ ಆವರಿಸಿದ ನಂತರವೇ ವಾಹನಗಳು ಸ್ಥಳಕ್ಕೆ ಆಗಮಿಸಿವೆ.
ಸಮೀಪದಲ್ಲಿ ತುಂಗಭದ್ರ ಎಡದಂಡೆ ಕಾಲುವೆಯ ನೀರನ್ನು ಬಳಕೆ ಮಾಡಲು ಅವಕಾಶವಿದ್ದು ಪಟ್ಟಣದಲ್ಲಿಯೇ ಅಗ್ನಿ ಶಾಮಕ ಠಾಣೆ ತೆರೆದಲ್ಲಿ ಪಟ್ಟಣ ಮತ್ತು ಸುತ್ತಮುತ್ತಲಿನ 30 ಕಿ.ಮೀ.ವ್ಯಾಪ್ತಿಯಲ್ಲಿ ಸಂಭವಿಸುವ ಅವಘಡಗಳನ್ನು ನಿಯಂತ್ರಿಸಲು ಸಾಧ್ಯ ಹೀಗಾಗಿ ಕವಿತಾಳದಲ್ಲಿ ಅಗ್ನಿ ಶಾಮಕ ಠಾಣೆ ತೆರೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ತೆರೆಯವುದು ಸೂಕ್ತ ಸದ್ಯ ಬೇಸಿಗೆಯ ನಾಲ್ಕು ತಿಂಗಳ ಅವಧಿಗಾದರೂ ಒಂದು ವಾಹನ ಮತ್ತು ಸಿಬ್ಬಂದಿಯನ್ನು ತಾತ್ಕಾಲಿಕ ವ್ಯವಸ್ಥೆ ಮಾಡುವುದು ಅಗತ್ಯಯಮನಪ್ಪ ದಿನ್ನಿ ಕವಿತಾಳ ಎಪಿಎಂಸಿ ಮಾಜಿ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.