ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ ಪಟ್ಟಣ ಪಂಚಾಯಿತಿ: ತಿಂಗಳಲ್ಲಿ 3 ಮುಖ್ಯಾಧಿಕಾರಿಗಳ ಬದಲಾವಣೆ

Published 20 ಏಪ್ರಿಲ್ 2024, 6:43 IST
Last Updated 20 ಏಪ್ರಿಲ್ 2024, 6:43 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣ ಪಂಚಾಯಿತಿಗೆ ಒಂದು ತಿಂಗಳ ಅವಧಿಯಲ್ಲಿ ಮೂವರು ಮುಖ್ಯಾಧಿಕಾರಿಗಳು ಬದಲಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹಿನ್ನೆಡೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಮುಖ್ಯಾಧಿಕಾರಿ ರವಿ.ಎಸ್ ರಂಗಸುಭೆ ಮಾರ್ಚ್‌ನಲ್ಲಿ ವರ್ಗಾವಣೆಯಾದರು. ಅವರ ಜಾಗಕ್ಕೆ ಮುದಗಲ್‌ನಿಂದ ಹನುಮಂತರಾಯ ನಾಯಕ ಅವರನ್ನು ನಿಯೋಜನೆ ಮಾಡಲಾಗಿತ್ತು. ಅವರು ಕರ್ತವ್ಯಕ್ಕೆ ಹಾಜರಾದ ವಾರದಲ್ಲಿ ಚುನಾವಣೆ ಕರ್ತವ್ಯದ ನಿಮಿತ್ತ ಅವರನ್ನು ವರ್ಗಾವಣೆ ಮಾಡಲಾಯಿತು. ಸದ್ಯ ಲಿಂಗಸುಗೂರಿನ ಕೆ.ದುರುಗಣ್ಣ ಅವರನ್ನು ಎರವಲು ಸೇವೆ ಮೇಲೆ ನಿಯೋಜನೆ ಮಾಡಲಾಗಿದೆ.

ಮೇಲಿಂದ ಮೇಲೆ ಅಧಿಕಾರಿಗಳ ವರ್ಗಾವಣೆಯಿಂದ ಸಾರ್ವಜನಿಕರ ಕೆಲಸಗಳಿಗೆ ಹಿನ್ನೆಡೆಯಾಗುತ್ತಿದೆ. ಹೊಸದಾಗಿ ಬರುವ ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಪಡೆಯುವಷ್ಟರಲ್ಲಿ ಮತ್ತು ವಿಶೇಷವಾಗಿ ಡಿಜಿಟಲ್ ಸಹಿ ಹೊಂದಿಸಿಕೊಳ್ಳುವಷ್ಟರಲ್ಲಿ ವರ್ಗಾವಣೆಯಾಗಿ ಹೊಸಬರು ಬಂದರೆ ಮತ್ತೆ ಮೊದಲಿನಿಂದ ಪ್ರತಿಯೊಂದು ನಿಯಮಗಳ ಪಾಲನೆಯಾಗಬೇಕು. ಹೀಗಾಗಿ ಸಾರ್ವಜನಿಕರು ನಿತ್ಯ ಪಂಚಾಯಿತಿಗೆ ಅಲೆಯುವಂತಾಗಿದೆ.

’ಪ್ರಭಾರ ಮುಖ್ಯಾಧಿಕಾರಿ ವಾರದಲ್ಲಿ ಎರಡು ದಿನ ಮಾತ್ರ ಕಚೇರಿಗೆ ಬರುವುದರಿಂದ ವಿವಿಧ ದಾಖಲೆ ಪಡೆಯಲು, ಕುಡಿಯುವ ನೀರಿನ ಸಮಸ್ಯೆ, ಸಿಬ್ಬಂದಿ ವೇತನ ಪಾವತಿ ಸೇರಿದಂತೆ ಅನೇಕ ಕೆಲಸಗಳು ವಿಳಂಬವಾಗಿವೆ. ತ್ರಯಂಭಕೇಶ್ವರ ಜಾತ್ರೆ ನಿಮಿತ್ತ ಒಂದು ವಾರ ಕಾಲ ಜಾನುವಾರು ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಜನ, ಜಾನುವಾರಿಗೆ ಕುಡಿಯುವ ನೀರು ಮತ್ತು ಬೀದಿ ದೀಪಗಳ ವ್ಯವಸ್ಥೆ ಮಾಡುವಲ್ಲಿ ತೊಂದರೆಯಾಗುತ್ತಿದೆ’ ಎಂದು ಮುಖಂಡ ಮೌನೇಶ ಹಿರೇಕುರಬರ ಆರೋಪಿಸಿದರು.

‘ತ್ರಯಂ ಭಕೇಶ್ವರ ಜಾತ್ರೆ ನಿಮಿತ್ತ ರಥೋತ್ಸವ ಹಾಗೂ ಒಂದು ವಾರ ಕಾಲ ಜಾನುವಾರು ಜಾತ್ರೆ ನಡೆಯುತ್ತದೆ. ಜಾತ್ರೆಗೆ ಬರುವ ಜನ ಜಾನುವಾರಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಕೊಳವೆಬಾವಿ ರಿಪೇರಿಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ಹೀಗಾಗಿ ನಾವುಗಳೇ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಣ್ಣ ಕವಿತಾಳ ಹೇಳಿದರು.

ಕಾಯಂ ಮುಖ್ಯಾಧಿಕಾರಿ ನೇಮಕ ಕುರಿತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಜರುಗಿಸಬೇಕು
-ಜಗದೀಶ ಗಂಗನ್ನವರ್‌, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ
ಕಾಯಂ ಮುಖ್ಯಾಧಿಕಾರಿಯನ್ನು ನೇಮಿಸುವಂತೆ ಮನವಿ ಮಾಡಿದ್ದರೂ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ
ರಮೇಶ ನಗನೂರು, ಕವಿತಾಳ ಪಟ್ಟಣ ಪಂಚಾಯಿತಿ ಸದಸ್ಯ
ತುರ್ತು, ಅನಿವಾರ್ಯ ಕೆಲಸಗಳಿದ್ದಲ್ಲಿ ಕಚೇರಿಗೆ ಬರುತ್ತೇನೆ. ಚುನಾವಣೆ ಕೆಲಸಗಳನ್ನು ನೋಡಿಕೊಳ್ಳಬೇಕಿದೆ. ಎರಡು ದಿನಗಳಲ್ಲಿ ಡಿಜಿಟಲ್‌ ಸಹಿ ವ್ಯವಸ್ಥೆಯಾಗುತ್ತದೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲಾಗುವುದು
ಕೆ.ದುರುಗಣ್ಣ, ಪ್ರಭಾರ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT