ಮಂತ್ರಾಲಯ(ರಾಯಚೂರು): ಶ್ರೀ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವವು ಸಂಭ್ರಮದಿಂದ ಮುಂದುವರಿದಿದ್ದು, ಮಂಗಳವಾರ ಮಧ್ಯಾರಾಧನೆಯು ವೈಭವದಿಂದ ನಡೆಯಿತು.
ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ)ದ ಅಧಿಕಾರಿಗಳು ರಾಯರಿಗೆ ಸಮರ್ಪಿಸಲು ತಂದಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ವಿಶೇಷ ವಾದ್ಯ ಮೇಳ, ಮೆರವಣಿಗೆ ಮೂಲಕ ಮಂತ್ರಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಶೇಷವಸ್ತ್ರವನ್ನು ಪಡೆದ ಶ್ರೀ ಸುಬುಧೇಂದ್ರ ತೀರ್ಥರು, ಅದನ್ನು ತಲೆಮೇಲೆ ಹೊತ್ತು ರಾಯರ ಸನ್ನಿಧಿಗೆ ಸಮರ್ಪಿಸಿದರು.
ಆನಂತರ ಪಂಚಾಮೃತ ಅಭಿಷೇಕ, ಮಂಗಳಾರತಿ, ವೃಂದಾವನಕ್ಕೆ ಪುಷ್ಪಾಲಂಕಾರ, ಶೇಷವಸ್ತ್ರ ಸಮರ್ಪಣೆ ಬಳಿಕ ಪ್ರಾಕಾರದಲ್ಲಿ ಸುವರ್ಣ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹವು ರಾಯರಿಗೆ ಜಯಘೋಷ ಕೂಗಿದರು.
ಮೂಲ ವೃಂದಾವನದ ಮಹಾ ಪಂಚಾಮೃತ ಅಭಿಷೇಕ ಮತ್ತು ಮೂಲ ರಾಮದೇವರ ಪೂಜೆ ವಿಶೇಷವಾಗಿ ನಡೆದವು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪೂಜೆ ನೆರವೇರಿಸಿದರು. ಭಕ್ತರು ಮಠದ ಪ್ರಾಕಾರದಲ್ಲಿ ಕುಳಿತು ಎಲ್ಇಡಿ ಪರದೆ ಮೂಲಕ ಪೂಜಾ ವಿಧಿವಿಧಾನಗಳನ್ನು ವೀಕ್ಷಿಸಿದರು. ಬೆಳಗಿನ ಜಾವದಿಂದ ಶಾಸ್ತ್ರೋಕ್ತವಾಗಿ ವಿಧಿವಿಧಾನಗಳನ್ನು ನೆರವೇರಸಲಾಯಿತು.
ಕೋವಿಡ್ ನಿಯಮ ಪಾಲನೆಯೊಂದಿಗೆ ವಿವಿಧೆಡೆಯಿಂದ ಭಕ್ತರು ರಾಯರ ದರ್ಶನಕ್ಕಾಗಿ ಬಂದಿದ್ದರು. ವೃಂದಾವನದ ದರ್ಶನ ಪಡೆದು ಪುನೀತರಾದರು. ಈ ಮೊದಲು ಕಾಣುತ್ತಿದ್ದ ಭಕ್ತರ ದಟ್ಟಣೆ ಇರಲಿಲ್ಲ. ವಾಸ್ತವ್ಯ ಉಳಿಯುವ ಬದಲು ದರ್ಶನ ಪಡೆದು ತೆರಳುತ್ತಿದ್ದ ಭಕ್ತರ ಸಂಖ್ಯೆ ಅಧಿಕವಾಗಿದೆ.
ರಾತ್ರಿ ಮಠದ ಪ್ರಾಕಾರದಲ್ಲಿ ರಜತ, ಸ್ವರ್ಣ, ನವರತ್ನ ರಥೋತ್ಸವಗಳು ನೆರವೇರಿದವು. ಚಂಡಿ ಮದ್ದಳೆ ವಾದ್ಯ ನಾದ ಮೊಳಗಿತ್ತು. ಮಹಿಳೆಯರು, ಮಕ್ಕಳು, ವಯೋವೃದ್ಧರೆಲ್ಲರೂ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಆರಾಧನೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಭಕ್ತರಿಗೂ ಅನ್ನಪ್ರಸದಾ ವ್ಯವಸ್ಥೆ ಮಾಡಲಾಗಿತ್ತು.