ಮಸ್ಕಿ: ‘ಬರಗಾಲ ಪರಿಹಾರದ ಮೊತ್ತವಾಗಿ ರಾಜ್ಯ ಸರ್ಕಾರ ₹18 ಸಾವಿರ ಕೋಟಿ ಕೇಳಿದರೆ ಕೇಂದ್ರ ಸರ್ಕಾರ ₹3,435 ಕೋಟಿ ಮಾತ್ರ ನೀಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದೆ. ರಾಜ್ಯದ ಜನರ ಓಟು ಕೇಳುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಶನಿವಾರ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಯಾವ ಕೊಡುಗೆ ನೀಡಿದ್ದಾರೆ. ರೈತ–ಕಾರ್ಮಿಕರಿಗೆ ಯಾವ ಯೋಜನೆ ತಂದಿದ್ದಾರೆ ಎಂಬುದನ್ನು ತೋರಿಸಲಿ’ ಎಂದರು.
ಉದ್ಯೋಗ ಕೇಳಿದ ಈ ದೇಶದ ಯುವಜನರಿಗೆ ಪಕೋಡ ಮಾರಾಟ ಮಾಡಿ ಎಂದು ಹೇಳಿದ ನರೇಂದ್ರ ಮೋದಿ ಅವರನ್ನು ಈ ದೇಶದ ಪ್ರಧಾನಿ ಎನ್ನಲು ನಾಚಿಕೆಯಾಗುತ್ತದೆ ಎಂದು ಹೇಳಿದರು.
ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ,‘ಕೇಂದ್ರ ಸರ್ಕಾರದ ಸಾಧನೆಗಳನ್ನು ಕೆಲವೇ ನಿಮಿಷಗಳಲ್ಲಿ ಹೇಳಬಹುದು. ಆದರೆ, 60 ವರ್ಷಗಳ ಕಾಲ ಈ ದೇಶ ಆಳಿದ ಕಾಂಗ್ರೆಸ್ ಸರ್ಕಾರದ ಸಾಧನೆ ಹೇಳಲು ದಿನಗಳು ಸಾಲುವುದಿಲ್ಲ. ಒಬ್ಬ ವ್ಯಕ್ತಿಯಿಂದ ದೇಶ ವಿಶ್ವಗುರು ಆಗುತ್ತದೆ ಎಂಬುದು ಕೇವಲ ಪ್ರಚಾರಕ್ಕಾಗಿ ಆಡುವ ಮಾತು. ಪ್ರತಿ ಮನೆ ಆರ್ಥಿಕವಾಗಿ ಸದೃಢವಾದಾಗ ಮಾತ್ರ ಭಾರತ ವಿಶ್ವಗುರು ಎಂದು ಒಪ್ಪಿಕೊಳ್ಳಲು ಸಾಧ್ಯ’ ಎಂದರು.
ಶಾಸಕ ಆರ್.ಬಸನಗೌಡ ತುರುವಿಹಾಳ, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್, ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ನಿರುಪಾದಿ ವಕೀಲ, ಮುಖಂಡ ಎಚ್.ಬಿ.ಮುರಾರಿ ಹಾಗೂ ಇತರರು ಮಾತನಾಡಿದರು.
ವೆಂಕಟರೆಡ್ಡಿ ಹಾಲಾಪುರ, ಸಿದ್ದನಗೌಡ, ಮಲ್ಲಾರೆಡ್ಡಿ, ಶ್ರೀಶೈಲಪ್ಪ, ಸಿದ್ದನಗೌಡ ಮಾಟೂರು, ಕಿರಿ ಲಿಂಗಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವಿರೂಪಣ್ಣ ಗುತ್ತೇದಾರ ಸೇರಿ ಇತರರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ನೂರಾರು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.