ಲಿಂಗಸುಗೂರು: ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಮೂಲಕ ಸಾರ್ವಜನಿಕರು ಡೆಂಗಿ ಮುಕ್ತ ಸಮಾಜ ನಿರ್ಮಾಣಕ್ಕೆ ಆರೋಗ್ಯ ಇಲಾಖೆಗೆ ಸಹಕರಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯ ಡಾ. ರುದ್ರಗೌಡ ಪಾಟೀಲ ಕೋರಿದರು.
ಸೋಮವಾರ ರಾಷ್ಟ್ರೀಯ ಡೆಂಗಿ ದಿನಾಚರಣೆ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಡೆಂಗಿ ವೈರಸ್ ಸೋಂಕು ಹರಡುತ್ತದೆ. ಜ್ವರ, ತಲೆನೋವು, ವಾಂತಿ, ಕಣ್ಣು ಊದಿಕೊಂಡು ನೋವು ಉಂಟಾಗುವುದು, ಕೈ–ಕಾಲುಗಳಲ್ಲಿ ಸೆಳೆತ, ನೋವು, ಆಯಾಸ ಉಂಟಾಗಬಹುದು. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾಕಾಪುರ ಮಾತನಾಡಿ, ನೀರಿನ ತೊಟ್ಟೆ, ಡ್ರಮ್, ಬ್ಯಾರೆಲ್ನಂತಹ ನೀರು ಸಂಗ್ರಹಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ತೊಟ್ಟೆಗಳನ್ನು ಸೊಳ್ಳೆ ನುಗ್ಗದಂತೆ ಮುಚ್ಚಬೇಕು. ಸೊಳ್ಳೆ ನಿರೋಧಕ ಪರದೆ ಬಳಸಬೇಕು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಕುಲಕರ್ಣಿ, ಸಿಬ್ಬಂದಿ ಅಶೋಕ ಮಡ್ಡಿಕಾರ, ಬಸವರಾಜ, ರವಿಕುಮಾರ, ಹುಚ್ಚಪ್ಪ, ಸುರೇಶ, ಮಂಜುನಾಥ, ರವಿ, ವಾಸಿಂ ರೆಹಮಾನ್, ಶಿವಲೀಲಾ, ಪದ್ಮಾವತಿ, ಅಂಬಮ್ಮ ಆಶಾ ಕಾರ್ಯಕರ್ತೆಯರು ಇದ್ದರು.